ಬೆಳಗಾವಿ: ಒಂದೆಡೆ ವಾಹನಗಳಿಗೆ ಶುಲ್ಕ ಸಂಗ್ರಹಿಸಲು ಕಂಟೋನ್ಮೆಂಟ್ ಬೋರ್ಡ್ ಸಿದ್ಧತೆ ನಡೆಸಿದ್ದರೆ, ಇನ್ನೊಂದೆಡೆ ಶುಲ್ಕ ಸಂಗ್ರಹಿಸಲು ಅವಕಾಶ ನೀಡಬಾರದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಂಗನಾಥ ಅವರಿಗೆ ಗುರುವಾರ ಮನವಿ ಸಲ್ಲಿಸಲಾಗಿದೆ.
ವಿವಿಧ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಶುಲ್ಕ ಸಂಗ್ರಹಿಸಲು ಕಂಟೋನ್ಮೆಂಟ್ ಬೋರ್ಡ್ ಗಣೇಶಪುರ ಸೇರಿದಂತೆ ಹಲವೆಡೆ ನಾಕಾಗಳನ್ನು ನಿರ್ಮಿಸಿದೆ.
ಕಂಟೋನ್ಮೆಂಟ್ ವ್ಯಾಪ್ತಿ ಪ್ರದೇಶದಿಂದ ಸಾಗುವ ವಾಣಿಜ್ಯ ವಾಹನಗಳಿಂದ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ. ಅದರನ್ವಯ ಶುಲ್ಕ ಸಂಗ್ರಹಿಸಲು ಬೇಕಾಗಿರುವ `ನಾಕಾ~ಗಳನ್ನು ನಿರ್ಮಿಸಲಾಗಿದೆ.
ಬೆಂಗಳೂರಿನಲ್ಲಿ ಗುರುವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಂಗನಾಥ ಅವರನ್ನು ಭೇಟಿ ಮಾಡಿರುವ ಶಾಸಕ ಸಂಜಯ ಪಾಟೀಲ ಹಾಗೂ ನವನಿರ್ಮಾಣ ಪಡೆಯ ರಾಜೀವ ಟೋಪಣ್ಣವರ ಅವರು, ಶುಲ್ಕ ಸಂಗ್ರಹಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕಂಟೋನ್ಮೆಂಟ್ ಬೋರ್ಡ್ ನಿಲುವು ಅವೈಜ್ಞಾನಿಕವಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದೆಯಾಗಲಿದೆ. ಸಂಚಾರ ಸಮಸ್ಯೆಯೂ ಆಗಲಿದೆ. ಆದ್ದರಿಂದ ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಕೋರಿದರು.
ಫೆ. 22ರಂದು ನವದೆಹಲಿಯಲ್ಲಿ ಯೋಜನಾ ಆಯೋಗದ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ವಾಹನ ಶುಲ್ಕ ಸಂಗ್ರಹವನ್ನು ರದ್ದುಪಡಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ಕಾರ್ಯದರ್ಶಿ ರಂಗನಾಥ ಅವರು ಭರವಸೆ ನೀಡಿದರು.