ನವದೆಹಲಿ (ಪಿಟಿಐ): ಶ್ರೀಮಂತರು ಹೆಚ್ಚಿನ ತೆರಿಗೆ ಪಾವತಿಸಬೇಕು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸಲಹೆ ನೀಡಿದ್ದಾರೆ.
ಚಿದಂಬರಂ 2004ರಿಂದ 2008ರ ಅವಧಿಯವರೆಗೆ ಕೇಂದ್ರ ಹಣಕಾಸು ಸಚಿವರಾಗಿದ್ದರು. ಅವರ ಕಾಲದಲ್ಲಿ ತೆರಿಗೆ ಕಡಿತದ ಮೂಲಕ ಜನಪ್ರಿಯತೆಗಳಿಸಿದ್ದರು. ಈಗ ತಮ್ಮ ನಿಲುವು ಬದಲಿಸಿ, ಶ್ರೀಮಂತರು ಹೆಚ್ಚಿನ ತೆರಿಗೆ ಕಟ್ಟಬೇಕು ಎನ್ನುವ ಸಲಹೆ ನೀಡಿದ್ದಾರೆ.
ಬುಧವಾರ ಇಲ್ಲಿ ಅಖಿಲ ಭಾರತ ಮ್ಯಾನೇಜ್ಮೆಂಟ್ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಚಿದು, ಯೂರೋಪ್ನಲ್ಲಿ ಶ್ರೀಮಂತರು ಗರಿಷ್ಠ ತೆರಿಗೆ ಪಾವತಿಸುತ್ತಾರೆ ಎಂದರು. `ತೆರಿಗೆ ಕಡಿತ ಯೋಜನೆ ಜಾರಿಗೆ ತಂದ ಮೊದಲ ಹಣಕಾಸು ಸಚಿವ ನಾನು.ಅದಕ್ಕೂ ಮೊದಲು ನೀವು ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದಿರಿ. ಈಗ ಶ್ರೀಮಂತರು ಹೆಚ್ಚಿನ ತೆರಿಗೆ ಪಾವತಿಸುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ನೆರವಾಗಬೇಕು~ ಎಂದರು. `ತೆರಿಗೆ ಹೆಚ್ಚಿಸಿ ಎಂದು ಹೇಳಲು ಇದು ಸೂಕ್ತ ಸ್ಥಳವೂ ಅಲ್ಲ, ನಾನು ಸಂಬಂಧಿಸಿದ ವ್ಯಕ್ತಿಯೂ ಅಲ್ಲ. ಆದರೆ, 2012-13ನೇ ಸಾಲಿನ ಬಜೆಟ್ಗೆ ಸಿದ್ಧತೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ದೇಶದ ಜನತೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಶ್ರೀಮಂತರು ಹೆಚ್ಚಿನ ತೆರಿಗೆ ಪಾವತಿಸುವ ಮೂಲಕ ದೇಶದ ತೆರಿಗೆ ವರಮಾನ ಹೆಚ್ಚಳಕ್ಕೆ ಕೊಡುಗೆ ನೀಡಬೇಕು ಎಂದರು.