ಪಟ್ನಾ (ಐಎಎನ್ಎಸ್): ದಾಖಲೆ ಪ್ರಮಾಣದ ಇಳುವರಿ ನೀಡುವ ಬಿಹಾರ ರೈತರ ಭತ್ತದ ನಾಟಿ ಪದ್ಧತಿಯ ಬಗ್ಗೆ ಕೃಷಿ ವಿಜ್ಞಾನಿಗಳು ಮತ್ತು ತಜ್ಞರು ತೀವ್ರ ಆಸಕ್ತಿ ತೆಳೆದಿದ್ದಾರೆ.
ಸ್ಥಳೀಯ ರೈತರು ಅನುಸರಿಸುತ್ತಿರುವ ಬೇರು ಬಲಗೊಳಿಸುವ ಭತ್ತದ ನಾಟಿ ಪದ್ಧತಿ (ಎಸ್ಆರ್ಐ) ಕುರಿತು ಅಧ್ಯಯನ ನಡೆಸಲು ನೆರೆಯ ಉತ್ತರ ಪ್ರದೇಶದ ಭತ್ತ ಅಭಿವೃದ್ಧಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಇಲ್ಲಿಗೆ ಜುಲೇ ಎರಡನೇ ವಾರ ಭೇಟಿ ನೀಡಲಿದ್ದಾರೆ.
ಬಿಹಾರದ ನಳಂದಾ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಎಸ್ಆರ್ಐ ಪದ್ಧತಿ ಅನುಸರಿಸಿ ದಾಖಲೆ ಪ್ರಮಾಣದ ಭತ್ತ ಬೆಳೆದಿರುವುದು ದೇಶ ಮತ್ತು ವಿದೇಶಗಳಲ್ಲಿ ಗಮನ ಸೆಳೆದಿದೆ. ಈ ಮೊದಲು ಕೇರಳ, ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್ ಹಾಗೂ ಇತರೆಡೆಗಳಿಂದ ಕೃಷಿ ವಿಜ್ಞಾನಿಗಳು ಇಲ್ಲಿಗೆ ಬಂದು ಅಧ್ಯಯನ ನಡೆಸಿ ಹೋಗಿದ್ದಾರೆ. ಕೇಂದ್ರ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಲಿದ್ದಾರೆ.
ಮೂರು ನಾಲ್ಕು ವರ್ಷಗಳ ಹಿಂದೆ ಎಸ್ಆರ್ಐ ಪದ್ಧತಿ ಮೂಲಕ ಭತ್ತ ಬೆಳೆಯುವುದು ಅವೈಜ್ಞಾನಿಕ ಎಂದು ವಿಜ್ಞಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, 2012-13ರಲ್ಲಿ 87 ಲಕ್ಷ ಟನ್ ದಾಖಲೆ ಪ್ರಮಾಣದಲ್ಲಿ ಭತ್ತ ಉತ್ಪಾದಿಸುವ ಮೂಲಕ ರೈತರು ಅವರ ಆಕ್ಷೇಪವನ್ನು ಹುಸಿಗೊಳಿಸಿದ್ದಾರೆ. ಪ್ರಸಕ್ತ ವರ್ಷ ನೂರು ಲಕ್ಷ ಟನ್ ಭತ್ತ ಉತ್ಪಾದನೆ ಗುರಿ ಹೊಂದಿದ್ದಾರೆ.
ಸ್ಥಳೀಯವಾಗಿ `ಶ್ರೀವಿಧಿ' ಪದ್ಧತಿ ಎಂದು ಕರೆಯಲಾಗುವ ಈ ಪದ್ಧತಿಯಲ್ಲಿ ಅತ್ಯಂತ ಕಡಿಮೆ ನೀರು ಬಳಸಿ ಸಾಂಪ್ರದಾಯಿಕ ಇಳುವರಿಗಿಂತ ನಾಲ್ಕಾರು ಪಟ್ಟು ಹೆಚ್ಚು ಇಳುವರಿ ಪಡೆಯಬಹುದು. ನಾಲ್ಕು ವರ್ಷದ ಹಿಂದೆ ಆರಂಭವಾದ ಈ ಪದ್ಧತಿ ಕ್ರಮೇಣ ಬಿಹಾರದ ಉಳಿದೆಡೆಯೂ ಜನಪ್ರಿಯವಾಗಿದೆ. 2009-10ರಲ್ಲಿ 36.4 ಲಕ್ಷ ಟನ್ ಭತ್ತ ಉತ್ಪಾದಿಸಿದ್ದ ಬಿಹಾರ, ಶ್ರೀವಿಧಿ ಪದ್ಧತಿ ಅನುಸರಿಸಿ 2012-13ರಲ್ಲಿ 87 ಲಕ್ಷ ಟನ್ ಭತ್ತ ಬೆಳೆದಿದೆ.
ನಳಂದಾ ಜಿಲ್ಲೆಯ ದರ್ವೇಶ್ಪುರದ ಸುಮಂತ್ ಕುಮಾರ್ ಎಂಬ ರೈತ 2011ರಲ್ಲಿ ಒಂದು ಹೆಕ್ಟೇರ್ನಲ್ಲಿ 224 ಕ್ವಿಂಟಲ್ ಭತ್ತ ಬೆಳೆದು ವಿಶ್ವ ದಾಖಲೆ ಸ್ಥಾಪಿಸಿದ್ದ.