ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಗರದಿಂದ ಹೆಚ್ಚಿನ ಪ್ರಯಾಣಿಕರು ಪ್ರಯಾಣ ಮಾಡುವ ನಿರೀಕ್ಷೆಯಿದ್ದು, ನಗರದ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ನಗರ ರೈಲು ನಿಲ್ದಾಣದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಇದೇ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಈ ನಿಯಮಗಳನ್ನು ಪಾಲಿಸುವಂತೆ ನಗರ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಧನ್ವಂತ್ರಿ ರಸ್ತೆ, ರೈಲು ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಪ್ಲಾಟ್ ಫಾರ್ಮ್ ರಸ್ತೆ, ಖೋಡಿ ಜಂಕ್ಷನ್ ರಸ್ತೆಗಳಲ್ಲಿ ಈ ಎರಡು ದಿನಗಳ ಕಾಲ ಎಲ್ಲಾ ಖಾಸಗಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಮೈಸೂರು, ಕೊಡಗು ಮತ್ತು ಕೇರಳಕ್ಕೆ ಹೋಗುವ ಎಲ್ಲಾ ಬಸ್ಸುಗಳು ಮೈಸೂರು ರಸ್ತೆಯ ಬಸ್ ನಿಲ್ದಾಣದಿಂದ ಹೊರಡಬೇಕೆಂದು ಸೂಚಿಸಲಾಗಿದೆ. ತಮಿಳುನಾಡು ಕಡೆಗೆ ಸಂಚರಿಸುವ ಬಸ್ಸುಗಳು ಶಾಂತಿನಗರ ಬಸ್ ನಿಲ್ದಾಣದಿಂದ ತೆರಳಬೇಕು.
ನಗರದ ಪ್ರಯಾಣಿಕರು ಬಸ್ ಅಥವಾ ರೈಲು ನಿಲ್ದಾಣಕ್ಕೆ ಆಟೊ ಅಥವಾ ಬಸ್ಸಿನ ಮೂಲಕ ಬರುವಂತೆ ಸೂಚಿಸಿದೆ. ಹಾಗೂ ಪ್ರಯಾಣಿಕರು ನಿಗದಿ ಮಾಡಿದ ಬಸ್ ನಿಲ್ದಾಣಗಳಲ್ಲಿಯೇ ಹೋಗಿ ಸಂಚಾರ ಮಾಡುವಂತೆ ಮನವಿ ಮಾಡಿದೆ.