ಬೆಂಗಳೂರು: `ಕ್ರೈಸ್ತರಲ್ಲಿ ಸಮನ್ವಯ ಮತ್ತು ಸಂಘಟನೆ ಮುಖ್ಯವಾಗಿದೆ~ ಎಂದು ವಿಧಾನ ಪರಿಷತ್ತಿನ ಮಾಜಿ ಉಪ ಸಭಾಪತಿ ಡೇವಿಡ್ ಸಿಮೆಯೋನ್ ಹೇಳಿದರು.
ಕ್ರೈಸ್ತ ಯುವ ಸಮುದಾಯವು ನಗರದ ಬಿಷಪ್ ಹೌಸ್ನಲ್ಲಿ ಭಾನುವಾರ ಏರ್ಪಡಿಸಿದ್ದ `ಕ್ರೈಸ್ತ ಸಮುದಾಯದ ಮುಂದಿರುವ ಸವಾಲುಗಳು~ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
`ಕ್ರೈಸ್ತ ಸಮುದಾಯದವರು ಸಂಘಟನೆಗೊಂಡು ಕೂಗಿ ಹೇಳಿದಾಗ ಮಾತ್ರ ನಮ್ಮ ಅಸ್ತಿತ್ವ ಉಳಿಯಲು ಸಾಧ್ಯ. ಇಲ್ಲವಾದರೆ, ನಾವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದು ಬಿಡಬೇಕಾಗುತ್ತದೆ~ ಎಂದರು.
`ಪ್ರಜಾವಾಣಿ~ ಸಹಾಯಕ ಸಂಪಾದಕ ದಿನೇಶ್ ಅಮೀನ್ಮಟ್ಟು, `ಒಂದು ವರ್ಗ ಶಕ್ತಿ ಪ್ರದರ್ಶನಕ್ಕೆ ಸಮಾವೇಶ ಮಾಡಿದರೆ, ಇನ್ನೊಂದು ವರ್ಗ ಅಭದ್ರತೆಯಿಂದ ಬಳಲುತ್ತದೆ. ಆಗ ಆತ್ಮರಕ್ಷಣೆಗೆ ತಮ್ಮ ಸಮಾವೇಶವನ್ನು ಏರ್ಪಡಿಸುತ್ತಾರೆ. ಹೀಗಾಗಿ ಮುಸ್ಲಿಂ ಮತ್ತು ಕ್ರೈಸ್ತರ ಸಮಾವೇಶಗಳು ಜರುಗುತ್ತವೆ~ ಎಂದರು.
`ಮುಸ್ಲಿಂರಿಗಿಂತ ಕ್ರೈಸ್ತರು ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದುವರಿದಿದ್ದಾರೆ. ಆದರೆ, ಅವರಲ್ಲಿಯೂ ಹಿಂದು ಧರ್ಮದಂತೆ ಬಡವ ಶ್ರೀಮಂತ ಮತ್ತು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ~ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಧರ್ಮ ಕ್ಷೇತ್ರದ ಗುರು ಸಿ.ಫ್ರಾನ್ಸಿಸ್ ಮತ್ತಿತರರು ಉಪಸ್ಥಿತರಿದ್ದರು.