ಚಾಮರಾಜನಗರ: ‘ಪ್ರತಿಯೊಬ್ಬರು ಸಂಚಾರ ನಿಯಮ ಪಾಲಿಸಿದರೆ ಅಪಘಾತ ತಪ್ಪಿಸಬಹುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಭೃಂಗೇಶ್ ಹೇಳಿದರು.
ನಗರದ ಮೌಲಾನಾ ಆಜಾದ್ ಕಮ್ಯೂನಿಟಿ ಹಾಲ್ನಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಯುವಶಕ್ತಿ ಪರಿಷದ್ನಿಂದ ಹಮ್ಮಿಕೊಂಡಿದ್ದ ಶಿಕ್ಷಕರ ಹಾಗೂ ಎಂಜಿನಿಯರ್ ದಿನಾಚರಣೆ, ಕಾನೂನು ಅರಿವು– ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮೊದಲು ಗುರುವಿಗೆ ಸ್ಥಾನ ಕೊಟ್ಟಿದ್ದೇವೆ. ಹಿಂದೆ ಆಶ್ರಮ ಪದ್ಧತಿಯಡಿ ಶಿಕ್ಷಣ ನೀಡಲಾಗುತ್ತಿತ್ತು. ಈಗ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಡಾ.ರಾಧಾಕೃಷ್ಣನ್ ಹಾಗೂ ವಿಶ್ವೇಶ್ವರಯ್ಯರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.
ವಾಹನ ಚಾಲನೆ ಮಾಡುವ ವೇಳೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬಾರದು. ಕಡ್ಡಾಯವಾಗಿ ಚಾಲನಾ ಪರವಾನಗಿ ಪಡೆಯಬೇಕು ಎಂದು ಹೇಳಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿ. ಮುರುಗೇಶ್ ಅಧ್ಯಕ್ಷತೆವಹಿಸಿದ್ದರು. ವಕೀಲರಾದ ಮಹಮ್ಮದ್ ವಾಸಿಂವುಲ್ಲಾ ಬಾಲ್ಯವಿವಾಹ ಮತ್ತು ಮಹಮ್ಮದ್ದೀಯ ಕಾನೂನು ಕುರಿತು ಉಪನ್ಯಾಸ ನೀಡಿದರು.
ಇದೇ ವೇಳೆ ನಿವೃತ್ತ ಶಿಕ್ಷಕ ಷಫೀವುಲ್ಲಾ ಖಾನ್, ಮುಖ್ಯೋಪಾಧ್ಯಾಯ ಮೊಹಮ್ಮದ್ ಸಾಬಿರ್, ವಿ. ರಾಜೇಂದ್ರ ಮತ್ತು ಎಂಜಿನಿಯರ್ ಎಂ.ಆರ್. ಸುಂದರೇಶ್ ಮೂರ್ತಿ, ಸೀಮಾಷಾ ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರೇಗೌಡ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ, ನಗರಸಭೆ ಸದಸ್ಯೆ ಶಭಾನಾ ಆತೀಖ್, ಎಸ್. ವೆಂಕಟನಾಗಪ್ಪಶೆಟ್ಟಿ, ಅಜ್ಮಲ್ ಅಹಮ್ಮದ್ ಷರೀಫ್, ಸೈಯದ್ ಅಮಾನುಲ್ಲಾ, ಅಬ್ದುಲ್ ಗಫೂರ್, ಎಲ್. ಸುರೇಶ್, ವೈ.ಆರ್. ಮಹೇಶ್ ಇದ್ದರು.