ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗುವ ಸಂಭವ ಇರುವುದರಿಂದ ಸುಗಮ ಸಂಚಾರಕ್ಕಾಗಿ ಕೆಲ ಬದಲಾವಣೆ ಮಾಡಲಾಗಿದೆ. ಶುಕ್ರವಾರದಿಂದ ಸೋಮವಾರದ ವರೆಗೆ ಈ ಬದಲಾವಣೆಗಳು ಜಾರಿಯಲ್ಲಿರುತ್ತವೆ.
ಧನ್ವಂತರಿ, ರೈಲ್ವೆ ನಿಲ್ದಾಣ, ಟ್ಯಾಂಕ್ಬಂಡ್, ಪ್ಲಾಟ್ಫಾರಂ ರಸ್ತೆ ಹಾಗೂ ಖೋಡೆ ಜಂಕ್ಷನ್ನಲ್ಲಿ ಎಲ್ಲ ರೀತಿಯ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಮೈಸೂರು, ಕೊಡಗು, ಕೇರಳ ಕಡೆ ಪ್ರಯಾಣಿಸುವ ಬಸ್ಗಳು ಮೈಸೂರು ರಸ್ತೆಯ ಉಪಗ್ರಹ ಬಸ್ ನಿಲ್ದಾಣದಿಂದ ಹೊರಡಲಿವೆ. ತಮಿಳುನಾಡಿನ ಕಡೆ ಸಂಚರಿಸುವ ಬಸ್ಗಳು ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿವೆ.
ಬಾಳೇಕಾಯಿ ಮಂಡಿ, ಜಕ್ಕರಾಯನಕೆರೆ, ಎನ್ಜಿಇಎಫ್ ಬಸ್ ನಿಲ್ದಾಣಗಳ ಸಮೀಪ ಅನವಶ್ಯಕವಾಗಿ ಬಸ್ಗಳನ್ನು ನಿಲ್ಲಿಸಲು ಅವಕಾಶವಿಲ್ಲ.
ಬೆಂಗಳೂರಿನಿಂದ ಹೊರಗೆ ಪ್ರಯಾಣಿಸುವವರು ಬಿಎಂಟಿಸಿ ಬಸ್, ಆಟೊಗಳ ಮೂಲಕ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಬರಬೇಕು. ಮೈಸೂರು ಕಡೆ ಸಂಚರಿಸುವವರು ಮೈಸೂರು ರಸ್ತೆಯ ಉಪಗ್ರಹ ಬಸ್ ನಿಲ್ದಾಣದಿಂದ ಪ್ರಯಾಣಿಸಬೇಕು.
ವಾಹನ ಸವಾರರು ಶುಕ್ರವಾರದಿಂದ ಸೋಮವಾರದ ವರೆಗೆ ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಕೆಂಪೇಗೌಡ ರಸ್ತೆ, ಗೂಡ್ಸ್ಶೆಡ್ ರಸ್ತೆ, ಸುಬೇದಾರ್ ಛತ್ರ ರಸ್ತೆ, ಪ್ಲಾಟ್ಫಾರಂ ರಸ್ತೆ, ಕೃಷ್ಣ ಫ್ಲೋರ್ಮಿಲ್ ರಸ್ತೆಗಳಲ್ಲಿ ಸಂಚರಿಸದೆ ಪರ್ಯಾಯ ರಸ್ತೆಗಳಲ್ಲಿ ಸಾಗಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.