ಮಡಿಕೇರಿ: ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರಿಪಡಿಸುವಂತೆ ಒತ್ತಾಯಿಸಿ ಮಡಿಕೇರಿ ನಗರ ಕಾಂಗ್ರೆಸ್ ಪದಾಧಿಕಾರಿಗಳು ಬುಧವಾರ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ರಾಜೀವ್ ಮಾಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಾದಚಾರಿಗಳ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದ ಸಂಚಾರಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಮಾಡುವಂತೆ ಅವರು ಆಗ್ರಹಿಸಿದರು.
ಮೈಸೂರು ರಸ್ತೆ ಹಾಗೂ ಮಂಗಳೂರು ರಸ್ತೆಯಲ್ಲಿ ಈಗ ವಾಹನ ನಿಲುಗಡೆಗೆ ಅವಕಾಶ ನೀಡಿರುವ ಪ್ರದೇಶಗಳನ್ನು ಬದಲಾವಣೆ ಮಾಡಬೇಕು. ನಗರದ ಮದ್ಯಭಾಗದಲ್ಲಿ ಅತಿಹೆಚ್ಚು ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟ ಹೆಚ್ಚಿರುವ ಕಾರಣ ಬಸ್, ಟ್ರಕ್ ಸೇರಿದಂತೆ ಭಾರಿ ವಾಹನಗಳ ಸಂಚಾರವನ್ನು ರಾಜಾಸೀಟ್ ಮಾರ್ಗವಾಗಿ ಓಡಿಸಲು ಕ್ರಮ ವಹಿಸುವಂತೆ ಒತ್ತಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಹಾರೂನ್, ನಗರಸಭೆ ಸದಸ್ಯರಾದ ಚುಮ್ಮಿದೇವಯ್ಯ, ಅಬ್ದುಲ್ ರಜಾಕ್ ಹಾಜರಿದ್ದರು.