ಶಿರ್ವ(ಕಟಪಾಡಿ): ಸಂತ ಡಾನ್ ಬಾಸ್ಕೊ ಸ್ಥಾಪಿಸಿದ ಸಾಲೇಶಿಯನ್ ಸಭೆ (150 ವರ್ಷ) ಶತಮಾನೋತ್ತರ ಚಿನ್ನದ ವರ್ಷದ ಪ್ರಯುಕ್ತ 2009ರಲ್ಲಿ ಇಟಲಿಯಿಂದ ಆರಂಭವಾದ ಸಂತ ಡಾನ್ ಬಾಸ್ಕೊ ಬಲಗೈ ಇರುವ (ಪವಿತ್ರ ಕುರುಹು) ಮೇಣದ ದೇಹಾಕೃತಿಯ ಪವಿತ್ರ ಯಾತ್ರೆ ಗುರುವಾರ ಇಲ್ಲಿನ ಆರೋಗ್ಯ ಮಾತೆ ಚರ್ಚ್ಗೆ ಆಗಮಿಸಿತು. ಶಿರ್ವ ಬಂಟಕಲ್ ಪೇಟೆಯಿಂದ ವಾಹನ ರ್ಯಾಲಿ ಹಾಗೂ ಮೆರವಣಿಗೆ ಮೂಲಕ ಪವಿತ್ರ ಕುರುಹನ್ನು ಚರ್ಚ್ಗೆ ತರಲಾಯಿತು.
ಸಂತರ ಪವಿತ್ರ ಕುರುಹು ಇರುವ ಗಾಜಿನಪೆಟ್ಟಿಗೆಗೆ ಮಂಗಳೂರಿನ ಬಿಷಪ್ ಫಾ.ಅಲೋಶಿಯಸ್ ಪಾವ್ಲ್ ಡಿಸೋಜ ಹೂಹಾರ ಹಾಕಿ ಯಾತ್ರೆಯನ್ನು ಸ್ವಾಗತಿಸಿದರು. ಬಳಿಕ ಯುವಕರಿಗಾಗಿ ವಿಶೇಷ ದಿವ್ಯ ಬಲಿಪೂಜೆ ನೆರವೇರಿಸಿ ಮಾತನಾಡಿದ ಬಿಷಪ್, `ಸಂತ ಡಾನ್ ಬಾಸ್ಕೊ ಜೀವಿತಾವಧಿಯಲ್ಲಿ ಯುವಕರ ಏಳಿಗೆಗಾಗಿ ಶ್ರಮಿಸಿದರು. ವಿಶ್ವ ಯುವ ಸಮುದಾಯಕ್ಕೆ, ಬಡ ಜನರಿಗೆ ಚೈತನ್ಯರೂಪಿಯಾಗಿ ಬೆಳೆದು ಸಂತರಾದರು. ಅವರ ಕುರುಹಿನ ಪವಿತ್ರ ಯಾತ್ರೆ ಶಿರ್ವಕ್ಕೆ ಆಗಮಿಸಿರುವುದು, ಅದನ್ನು ವೀಕ್ಷಿಸುವ ಅವಕಾಶ ಭಕ್ತ ಸಮುದಾಯಕ್ಕೆ ದೊರಕಿರುವುದು ಕೊಂಕಣ ಪ್ರಾಂತ್ಯದ ಜನರ ಜೀವಮಾನದ ಸುಯೋಗ~ ಎಂದರು.
ಯುವಜನತೆ, ವಿದ್ಯಾರ್ಥಿಗಳು ಪವಿತ್ರ ಕುರುಹಿನ ಪೆಟ್ಟಿಗೆಗೆ ಭಕ್ತಿಭಾವದಿಂದ ಪುಷ್ಪ ಸಿಂಚನ ನೆರವೇರಿಸಿದರು. ಸಂಜೆ ಪ್ರಾಂತ್ಯದ ಗುರು ಫಾ.ಡೆನಿಸ್ ಮೊರಾಸ್ ಪ್ರಭು ಬಲಿಪೂಜೆ ನೆರವೇರಿಸಿದರು. ಕೊಂಕಣ ಪ್ರಾಂತ್ಯದ ಕ್ರೈಸ್ತ ವರಿಷ್ಠ ಫಾ.ಈಯನ್ ಫೆಗರೋಡೋ, ಡಾನ್ ಬಾಸ್ಕೊ ಸಭೆಯ ಫಾ.ಮ್ಯೋಕ್ಸಿಮ್ ಡಿಸೋಜಾ, ಉಡುಪಿ ಚರ್ಚ್ನ ಧರ್ಮಗುರು ಫಾ.ಫ್ರೆಡ್ ಮಸ್ಕರೇನ್ಹಸ್, ಫಾ.ಮೈಕಲ್ ಮಸ್ಕರೇನ್ಹಸ್, ಶಿರ್ವ ಚರ್ಚ್ನ ಧರ್ಮಗುರು ಫಾ. ಸ್ಟ್ಯಾನಿ ತಾವ್ರೊ, ಉಪಾಧ್ಯಕ್ಷ ಅರ್ವಿನ್ ಡಿಸೋಜ, ಕಾರ್ಯದರ್ಶಿ ಮೆಲ್ವಿನ್ ಅರನ್ನಾ ಇದ್ದರು.