ರಾಯಚೂರು: ಮಹಿಳೆಯರಿಗೆ ಸಂತಾನ ಭಾಗ್ಯಕ್ಕಾಗಿ ಮಕ್ಕಳಾಗುವ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯರನ್ನು ಲೈಂಗಿಕವಾಗಿ ಬಳಸುತ್ತಿದ್ದ ದೇವದುರ್ಗದ ಬೆಟ್ಟದ ಹತ್ತಿರದ ಶಂಭುಲಿಂಗ ದೇವಸ್ಥಾನದ ಪೂಜಾರಿ ವೀರೇಶ ಸೂಗರಯ್ಯಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್ ನಾಗರಾಜ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಪಿಯನ್ನು ಆಂಧ್ರಪ್ರದೇಶದ ಮಕ್ತಲ್ ತಾಲ್ಲೂಕಿನ ಚಿಂತಲಕುಂಟಾ ಗ್ರಾಮದಲ್ಲಿ ಭಾನುವಾರ ಬಂಧಿಸಲಾಗಿದೆ. ಆರೋಪಿ ಬಂಧನಕ್ಕೆ ದೇವದುರ್ಗ ಸಿಪಿಐ ರಮೇಶ ಸಿ.ಮೇಟಿ, ಪಿಎಸ್ಐ ಬಸವರಾಜ ಪುಲ್ಹಾರಿ, ರವಿ, ಪುರುಷೋತ್ತಮ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ರಾಮಣ್ಣ, ದೇವಪ್ಪ, ವಿಶ್ವನಾಥರೆಡ್ಡಿ, ಹನುಮಂತರಾಯ, ಮರಿಸ್ವಾಮಿ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು ಎಂದು ತಿಳಿಸಿದರು.
ಈ ತಂಡದ ಸದಸ್ಯರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿ ಬಸವ ಅಲಿಯಾಸ್ ಬಸವರಾಜ ಸಿಂಧನೂರು ಮತ್ತು ನಾಗರಾಜ ಕುಂಬಾರ ತಲೆ ಮರೆಸಿಕೊಂಡಿದ್ದುಬಂಧಿಸಲಾಗುವುದು ಎಂದು ಹೇಳಿದರು.
ಮಟ್ಕಾ ಜೂಜಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಿರವಾರ ಪಟ್ಟಣದ ನಕಲಿ ಇ– ಸ್ಟಾಂಪಿಂಗ್ ಸಂಬಂಧಿಸಿದಂತೆ ಆರೋಪಿ ಬಂಧಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ, ಸಿಪಿಐ ರಮೇಶ, ಮೇಟಿ, ಸಿಪಿಐ ಚಂದ್ರಶೇಖರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.