ಹೊಸಕೋಟೆ: ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಪಟ್ಟಣದಲ್ಲಿ ಸಂತೆ ಸರ್ಮಿಸಲು ಸೂಕ್ತ ಜಾಗವನ್ನು ಒದಗಿಸಬೇಕು ರಾಜ್ಯ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ತಾಲ್ಲೂಕು ಶಾಖೆಯು ತಹಶೀಲ್ದಾರ್ ಮತ್ತು ಪುರಸಭೆ ಅಧ್ಯಕ್ಷರಿಗೆ ಶುಕ್ರವಾರ ಮನವಿ ಸಲ್ಲಿಸಿದೆ.
ತಾಲ್ಲೂಕಿನಲ್ಲಿ ಹೆಚ್ಚಿನ ಜನರು ಕೃಷಿ ಆಧಾರಿತ ಕಸುಬನ್ನೇ ಅವಲಂಬಿಸಿದ್ದಾರೆ. ಸಣ್ಣ ಹಿಡುವಳಿದಾರರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಬೆಂಗಳೂರಿಗೆ ಹೋಗಬೇಕಾಗಿದೆ. ಇದರಿಂದ ವೆಚ್ಚ ಹೆಚ್ಚಾಗುತ್ತದೆ. ಈ ಹಿಂದೆ ಪಟ್ಟಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ನಿಲ್ಲಿಸಿದ್ದರಿಂದ ಬೀದಿ ಮತ್ತು ಸಂತೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಸ್ಥಳವಿಲ್ಲದೆ ಜೀವನ ನಿರ್ವಹಣೆಗೂ ತೊಂದರೆಯಾಗಿದೆ. ಗ್ರಾಹಕರಿಗೂ ಕೈಗೆ ಎಟುಕುವ ಬೆಲೆಯಲ್ಲಿ ಕೃಷಿ ಉತ್ಪನ್ನಗಳು ಸಿಗದಂತಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎನ್.ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಜೆ.ಆನಂದ್ಸಿಂಗ್ ಮನವಿಯಲ್ಲಿ ತಿಳಿಸಿದ್ದಾರೆ.