ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ ಹೆಗ್ಡೆ ಹೋರಾಟಕ್ಕೆ ಬೆಂಬಲ ಅಗತ್ಯ

Last Updated 23 ನವೆಂಬರ್ 2011, 8:00 IST
ಅಕ್ಷರ ಗಾತ್ರ

ಹಾಸನ: `ನಾಡಿನ ಜನರು ಲಕ್ಷಾಂತರ ಕೋಟಿ ರೂಪಾಯಿಯ ಅದಿರು ಸಂಪತ್ತು ಲೂಟಿಯಾಗು    ತ್ತಿದ್ದುದನ್ನು ನೋಡಿಯೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾಗ, ಅವರೆಲ್ಲರ ಅಸಹಾಯಕತೆಯ ಮೂರ್ತ ರೂಪದಂತೆ ಸಂತೋಷ ಹೆಗ್ಡೆ ಕಲಸ ಮಾಡಿ, ಜನರಲ್ಲಿ ಭರವಸೆ ಮೂಡಿಸಿದ್ದರು. ಅಂಥವರಿಗೆ ಬೆಂಬಲ ಸೂಚಿಸುವುದು ಎಲ್ಲರ ಕರ್ತವ್ಯ~ ಎಂದು ಲೇಖಕಿ ಬಾನು ಮುಷ್ತಾಕ್ ನುಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಅವರನ್ನು ಬೆಂಬಲಿಸುವ ಸಲುವಾಗಿ ಭ್ರಷ್ಟಾಚಾರ ವಿರೋಧಿ ಆಂದೋಲನದವರು ಮಂಗಳವಾರ ನಗರದ ಹೇಮಾವತಿ ಪ್ರತಿಮೆ ಮುಂದೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಹೆಗ್ಡೆ ಅವರ ದಿಟ್ಟ ನಡೆಯಿಂದಾಗಿ ಎಲ್ಲ ಪಕ್ಷದವರಲ್ಲೂ ನಡುಕ ಹುಟ್ಟಿದೆ. ಅದಕ್ಕಾಗಿಯೇ ಅವರ ಮೇಲೆ ವಾಗ್ದಾಳಿ ಮಾಡುತ್ತ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾಡಿನ ಒಳಿತನ್ನು ಬಯಸುವ ಮತ್ತು ಭ್ರಷ್ಟಾಚಾರವನ್ನು ವಿರೋಧಿಸುವ ಎಲ್ಲರೂ ಈ ಸಂದರ್ಭದಲ್ಲಿ ಹೆಗ್ಡೆ ಅವರ ಬೆಂಬಲಕ್ಕೆ ನ್ಲ್ಲಿಲಬೇಕು. ನಮ್ಮ ರಾಜಕಾರಣಿಗಳ ನಡವಳಿಕೆಯನ್ನು ನೋಡಿ ಇಡೀ ದೇಶ ನಗುವಂತಾಗಿದೆ~ ಎಂದರು.

ಹೋರಾಟಗಾರ ಮಂಜುನಾಥ ದತ್ತ ಮಾತನಾಡಿ, `ರಾಜ್ಯದಲ್ಲಿ ಹತ್ತು ಹಲವು ಚಳವಳಿಗಳು ನಡೆದಿದ್ದರೂ ಮತ್ತೆ ಮತ್ತೆ ಹೊಸ ಸಂಕಟಗಳು ಎದುರಾಗುತ್ತಿವೆ. ನಾಗರಿಕರು ಯೋಗ್ಯರ ಬೆಂಬಲಕ್ಕೆ ನಿಲ್ಲದಿರುವುದೇ ಇದಕ್ಕೆ ಕಾರಣ. ಭ್ರಷ್ಟರ ವಿರುದ್ಧ ಧ್ವನಿ ಎತ್ತುವವರ ಬೆನ್ನಿಗೆ ನಿಲ್ಲುವ ಕೆಲಸವನ್ನು ಎಲ್ಲರೂ ಮಾಡಬೇಕು. ನಾವು ಒಳ್ಳೆಯವರನ್ನು ಬೆಂಬಲಿಸದಿದ್ದರೆ ಕೆಟ್ಟವರನ್ನು ವಿರೋಧಿಸುವ ಅಧಿಕಾರವೂ ನಮಗೆ ಇರುವುದಿಲ್ಲ~ ಎಂದರು.

`ರಾಜ್ಯದ ಯಾವ ಜಿಲ್ಲೆಯಲ್ಲೂ ಹೆಗ್ಡೆ ಬೆಂಬಲಕ್ಕಾಗಿ ಯಾರೂ ಇಂಥ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಹೆಗ್ಡೆ ಮಾತ್ರವಲ್ಲ ರಾಜ್ಯದಲ್ಲಿ ಹಲವು ಮಂದಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಾರೆ ಅವರೆಲ್ಲರಿಗೂ ~ನೀವು ಒಂಟಿಯಲ್ಲ, ನಿಮ್ಮ ಜತೆಗೆ ನಾವಿದ್ದೇವೆ~ ಎಂಬ ಭರವಸೆ ನೀಡಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳ್ಲ್ಲಲೂ ಹೆಗ್ಡೆ ಅವರನ್ನು ಬೆಂಬಲಿಸುವ ಫಲಕಗಳನ್ನು ಹಾಕಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಉಳಿದ ಜಿಲ್ಲೆಯವರೂ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದು ನಮ್ಮ ಬಯಕೆ.

`ಮಾಹಿತಿ ಹಕ್ಕು ಕಾಯ್ದೆ ನಾಗರಿಕರಿಗೆ ಬಲಿಷ್ಠ  ಅಸ್ತ್ರವಾಗಿದ್ದರೂ ಹಾಸನದಲ್ಲಿ ಇದರ ಬಳಕೆ ಕಡಿಮೆ. ರಾಜಕೀಯವಾಗಿ ಇಷ್ಟು ಮಹತ್ವ ಪಡೆದಿರುವ ಜಿಲ್ಲೆಯಲ್ಲೇ ಈ ಅಸ್ತ್ರ ಬಳಕೆಯಾಗದಿದ್ದರೆ ತಪ್ಪು ಸಂದೇಶ ಹೋದಂತಾಗುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ನಾವು ಮಾಡುತ್ತೇವೆ~ ಎಂದು ದತ್ತಾ ನುಡಿದರು.

ಪ್ರಾಸ್ತಾವಿಕ ಮಾತನಾಡಿದ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ, `ಸಂತೋಷ ಹೆಗ್ಡೆ ಲೋಕಾಯುಕ್ತ ಸಂಸ್ಥೆಗೇ ಗೌರವ ತಂದುಕೊಟ್ಟವರು. ಇಂದು ಎಲ್ಲ ಪಕ್ಷದವರೂ ಅವರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದನ್ನು ಖಂಡಿಸುವುದು ಎಲ್ಲರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಸಂತೋಷ ಹೆಗ್ಡೆ ಹಾಗೂ ಗಣಿ ಬಗ್ಗೆ ತನಿಖೆಗೆ ಕಾರಣರಾದ ಡಾ. ಎಸ್.ಆರ್. ಹಿರೇಮಠ ಅವರನ್ನು ಹಾಸನಕ್ಕೆ ಕರೆಸಿ ಸನ್ಮಾನಿಸುವ ಯೋಚನೆಯೂ ಇದೆ. ಶೀಘ್ರದಲ್ಲೇ ಅವರನ್ನು ಸಂಪರ್ಕಿಸಿ ಹಾಸನಕ್ಕೆ ಆಹ್ವಾನಿಸಲಾಗುವುದು~ ಎಂದರು.

ಹೇಮಾವತಿ ಪ್ರತಿಮೆಯ ಬಳಿಯಲ್ಲಿ ಸಂತೋಷ್ ಹೆಗ್ಡೆ ಭಾವಚಿತ್ರವಿರುವ ದೊಡ್ಡ ಬ್ಯಾನರ್ ಹಾಕಿ ಅದರ ಮೇಲೆ ಸಹಿ ಮಾಡುವ ಮೂಲಕ ನಾಗರಿಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ಡಾ. ವೀರಭದ್ರಪ್ಪ, ಕಿಶೋರ್ ಕುಮಾರ್, ಧರ್ಮೇಶ್, ಸುರೇಶ್ ಗುರೂಜಿ, ಕೆ.ಟಿ. ಜಯಶ್ರೀ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT