ಮೆರಿಲ್ಯಾಂಡ್ (ಅಮೆರಿಕ): ಕುಟುಂಬದ ಎಲ್ಲರೂ ಸದಾ ಕಾಲ ಸಂತೋಷದಿಂದ ಇರಲು ಬೇಕಾಗಿರುವ ಮಾರ್ಗಸೂಚಿ ರೂಪಿಸಿಕೊಳ್ಳುವುದು ಅಗತ್ಯ ಎಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದರು.
ಅವರು ಇಲ್ಲಿ ಜೆ.ಎಸ್.ಎಸ್. ಸ್ಪಿರಿಚುಯಲ್ ಮಿಷನ್ನಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ ತಾಯಿಯನ್ನು ಪೂಜ್ಯ ಭಾವನೆಯಿಂದ ಕಂಡು ಸಂತೋಷದಿಂದ ಇರುವಂತೆ ಮಾಡಿದರೆ ಮನೆ ಮಂದಿಯೆಲ್ಲ ಸಂತೋಷದಿಂದ ಇರಲು ಸಾಧ್ಯ. ಹಾಗೆಯೇ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳುವುದು ಮತ್ತು ರಾಷ್ಟ್ರ ಸೇವೆ ಸಲ್ಲಿಸುವುದು ಕೂಡ ಕರ್ತವ್ಯವಾಗಬೇಕು ಎಂದು ಹೇಳಿದರು.
ಜೆಎಸ್ಎಸ್ ಮಹಾ ವಿದ್ಯಾಪೀಠ ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಅವರು ಪ್ರಶಂಸಿದರು. ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಅದನ್ನು ಮುಂದಿನ ತಲೆಮಾರು ಅಳವಡಿಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಜೀವನದಲ್ಲಿ ಮನುಷ್ಯರು ಭೌತಿಕ ಸಂಪತ್ತು ಗಳಿಸಿ ಸುಖವಾಗಿರುವುದು ಎಷ್ಟು ಮುಖ್ಯವೋ ಅದಕ್ಕಿಂತ ತೃಪ್ತಿಯಿಂದ ಇರುವುದು ಮುಖ್ಯ. ಪರಸ್ಪರ ಅರ್ಥ ಮಾಡಿಕೊಂಡು ಬದುಕುವುದು ಮುಖ್ಯ ಎಂದರು.
`ಅಕ್ಕ'ದ ಅಧ್ಯಕ್ಷ ಅಮರನಾಥ ಗೌಡ ಅವರು ಜೆಎಸ್.ಎಸ್. ಸ್ಪಿರಿಚುಯಲ್ ಮಿಷನ್ನ ಬೆಳವಣಿಗೆಗೆ ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. `ಅಕ್ಕ'ದ ಕಾರ್ಯಾಧ್ಯಕ್ಷ ಡಾ.ವಿಶ್ವಾಮಿತ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾಂಟ್ಗೋಮರಿ ಪ್ರತಿನಿಧಿ ರೆವರೆಂಡ್ ಮ್ಯಾನ್ಸ್ ಫೀಲ್ಡ್ ಕೆನ್ಮನ್, ಕುಮಾರ್ ರಾಜಶೇಖರ್, ಜೆ.ಎಸ್.ಎಸ್. ಡೀಮ್ಡ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸುರೇಶ್, ಮಹೇಶ್ ನಾಗರಾಜಯ್ಯ, ನಾಗಶಂಕರ್ ಮಾತನಾಡಿದರು.