ಹಾವೇರಿ: ಕಾರ್ಖಾನೆ ಆರಂಭವಾಗಿದ್ದರೂ ಕಬ್ಬು ನುರಿಸಲು ವಿಳಂಬ ಮಾಡುತ್ತಿರುವ ಸಂಗೂರಿನ ಜಿ.ಎಂ. ಶುಗರ್ಸ್ ಆಡಳಿತ ಮಂಡಳಿ ಕ್ರಮವನ್ನು ವಿರೋಧಿಸಿ ಜಿಲ್ಲೆಯ ಕಬ್ಬು ಬೆಳೆಗಾರರು ಶನಿವಾರ ಕಾರ್ಖಾನೆ ಗೇಟ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಒಂದು ತಿಂಗಳ ಹಿಂದೆ ಆರಂಭವಾದ ಕಾರ್ಖಾನೆ ಕೇವಲ ಬೆರಳೆಣಿಕೆ ದಿನಗಳ ಕಾಲ ಕಬ್ಬು ನುರಿಸಿದ್ದು, ಉಳಿದ ದಿನಗಳಲ್ಲಿ ಕಾರ್ಖಾನೆ ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರಿಗೆ ಅಪಾರ ಹಾನಿಯಾಗಿದ್ದು, ಅದನ್ನು ಕಾರ್ಖಾನೆ ಆಡಳಿತ ಮಂಡಳಿಯೇ ಭರಿಸಬೇಕು ಮತ್ತು ಒಂದು ವರ್ಷದ ಮಟ್ಟಿಗೆ ಕಾರ್ಖಾನೆಯನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದು ಕಬ್ಬು ನುರಿಸಬೇಕೆಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಕಾರ್ಖಾನೆ ಆವರಣದ ರೈತ ಭವನದಲ್ಲಿ ಕಾರ್ಖಾನೆ ಸಮಸ್ಯೆ ಕುರಿತು ಚರ್ಚಿಸಲು ರೈತರು ಸಭೆ ನಡೆಸಿದರು. ಸಭೆಗೆ ಜಿ.ಎಂ. ಶುಗರ್ಸ್ನ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಲಿಂಗರಾಜು ಅವರನ್ನು ಆಹ್ವಾನಿಸಲಾಗಿತ್ತು.
ಆದರೆ, ಸಭೆಗೆ ಅವರು ಹಾಜರಾಗದೇ ಕಾರ್ಖಾನೆಯ ಉಪಾಧ್ಯಕ್ಷರನ್ನು ಕಳುಹಿಸಿಕೊಟ್ಟರು ಇದರಿಂದ ಆಕ್ರೋಶಗೊಂಡ ರೈತರು ಅವರೊಂದಿಗೆ ಚರ್ಚಿಸದೇ, ಕಾರ್ಖಾನೆ ಗೇಟ್ಗೆ ಬೀಗ ಹಾಕಿ ಹಾನಗಲ್-ಹಾವೇರಿ ರಸ್ತೆಯಲ್ಲಿ ಕಟ್ಟಿಗೆ ಇಟ್ಟು ಕಬ್ಬು ಹೇರಿದ್ದ ಟ್ರ್ಯಾಕ್ಟರ್ ಗಳನ್ನು ಅಡ್ಡ ನಿಲಿಸ್ಲಿದ ರೈತರು ರಸ್ತೆ ತಡೆ ನಡೆಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಜೆಎಂ ಶುಗರ್ಸ್ ಮಾಲೀಕರು, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಲಿಂಗರಾಜು ಅವರು ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲು ತಾವು ಸಿದ್ಧ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು.
ನಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ, ಕೆಲವು ರೈತ ಮುಖಂಡರು ರಸ್ತೆ ತಡೆಯಿಂದ ಸಂಕ್ರಾಂತಿಗೆ ತೆರಳುವ ಜನರಿಗೆ ತೊಂದರೆಯಾಗಲಿದೆ. ಮಾಲೀಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡಕೊಳ್ಳೋಣ ಎನ್ನುವ ಸಲಹೆ ಮುಂದಿಟ್ಟಾಗ ರೈತರು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಪ್ರತಿಭಟನೆಯಿಂದ ಹಿಂದೆ ಸರಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಶಿವಾನಂದ ಗುರುಮಠ, ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಬೆಟಗೇರಿ, ಮುಖಂಡರಾದ ಸಿದ್ಧಣ್ಣ ಬೆಳ್ಳಕ್ಕಿ, ವಬಸಪ್ಪ ಗೋವಿ, ಸುರೇಶಗೌಡ್ರು ಪಾಟೀಲ ಅಲ್ಲದೇ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.