ಕೋಲ್ಕತ್ತ (ಪಿಟಿಐ): `ಸಚಿನ್ ತೆಂಡೂಲ್ಕರ್ ಚಿನ್ನದ ಹುಡುಗ. ಹಾಗಾಗಿಯೇ ಅವರಿಗೆ ನಾವು ಚಿನ್ನದ ಬ್ಯಾಟ್ ಹಾಗೂ ಚೆಂಡು ನೀಡಿ ಗೌರವಿಸಿದ್ದೇವೆ. ನಿಮ್ಮ ಸಾಧನೆಗೆ ನಮ್ಮ ಅಭಿನಂದನೆಗಳು~
-ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ ಮಾತಿದು. ಶತಕಗಳ ಶತಕದ ಸಾಧನೆ ಮಾಡಿರುವ ತೆಂಡೂಲ್ಕರ್ ಅವರನ್ನು ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಜಂಟಿಯಾಗಿ ಸನ್ಮಾನಿಸಿದವು.
ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯಕ್ಕೆ ಮುನ್ನ ನಡೆದ ಪುಟ್ಟ ಸಮಾರಂಭದಲ್ಲಿ ಸಚಿನ್ ಅವರಿಗೆ ಚಿನ್ನದ ಬ್ಯಾಟ್ ಹಾಗೂ ಚೆಂಡಿನೊಂದಿಗೆ ನೂರು ರಸಗುಲ್ಲ ತುಂಬಿದ ಬ್ಯಾಟ್ನ ಆಕಾರದ ಬಾಟಲಿಯನ್ನು ಮಮತಾ ನೀಡಿದರು.
ಸಿಎಬಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಕೂಡ ನೆನಪಿನ ಕಾಣಿಕೆ ನೀಡಿದರು. ಈ ಸಂದರ್ಭದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ತೆಂಡೂಲ್ಕರ್, `ಇಷ್ಟು ವರ್ಷಗಳಿಂದ ನೀವು ನನಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಅಭಿನಂದನೆಗಳು. ಇಲ್ಲಿ ಆಡುವುದು ಒಂದು ವಿಶೇಷ ಅನುಭವ. ಆ ನೆನಪುಗಳನ್ನು ನಾನು ಯಾವತ್ತಿಗೂ ಮರೆಯಲಾರೆ. ನೀವು ಇದೇ ರೀತಿಯ ಬೆಂಬಲ ಮುಂದುವರಿಸುತ್ತೀರಿ ಎಂಬ ವಿಶ್ವಾಸ ನನ್ನದು~ ಎಂದರು.