ಬೆಂಗಳೂರು: ಆರ್.ವಿ. ದೇಶಪಾಂಡೆ ಅವರು 2001-02ರ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿದ್ದಾಗ, ಅನರ್ಹ ಕಂಪೆನಿಗಳಿಗೂ ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
`ದೇಶಪಾಂಡೆ ಅವರು ಮಾಹಿತಿ ತಂತ್ರಜ್ಞಾನ ಕಾರಿಡಾರ್ ಸ್ಥಾಪನೆಗೆ ಬೆಂಗಳೂರು ಹೊರವಲಯದ ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ವರ್ತೂರಿನಲ್ಲಿ ಒಟ್ಟು 500 ಎಕರೆ ಜಮೀನು ಸ್ವಾಧೀನ ಮಾಡಿಕೊಂಡಿದ್ದರು. ಆದರೆ ಆ ಜಮೀನಿನಲ್ಲಿ ಕೆಲವನ್ನು ಅನರ್ಹ ಕಂಪೆನಿಗಳಿಗೂ ಹಂಚಿಕೆ ಮಾಡಿದ್ದಾರೆ' ಎಂದು ಬೆಳಂದೂರು ನಿವಾಸಿ ವಾಸುದೇವ ರೆಡ್ಡಿ ದೂರು ಸಲ್ಲಿಸಿದ್ದಾರೆ.
ರೆಡ್ಡಿ ಅವರು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ವಿರುದ್ಧವೂ ಕೆಲವು ಆರೋಪಗಳನ್ನು ಮಾಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ದೇವರಬೀಸನಹಳ್ಳಿಯಲ್ಲಿ ಜಮೀನನ್ನು ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್, ವಿಚಾರಣೆಯನ್ನು ಇದೇ 10ಕ್ಕೆ ಮುಂದೂಡಿದ್ದಾರೆ.