ನವದೆಹಲಿ (ಪಿಟಿಐ): ದುಷ್ಕರ್ಮಿಗಳು ದೆಹಲಿ ಸರ್ಕಾರದ, ಆಮ್ ಆದ್ಮಿ ಪಕ್ಷದ ಸಚಿವೆ ರಾಖಿ ಬಿರ್ಲಾ ಅವರ ಕಾರಿನ ಮೇಲೆ ಕಲ್ಲು ಎಸೆದ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ.
ಸಂಜೆ 6ಗಂಟೆಗೆ ಸಂತೋಷಿ ಮಾ ಮಂದಿರಕ್ಕೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅವರ ಕಾರಿಗೆ ಕಲ್ಲು ಎಸೆದು ಕಾರಿನ ಗಾಜಿಗೆ ಹಾನಿ ಮಾಡಿದ್ದಾರೆ. ರಾಖಿ, ತಮ್ಮ ಖಾಸಗಿ ಕಾರಿನ ಮುಂದಿನ ಆಸನದಲ್ಲಿಯೇ ಕುಳಿತಿದ್ದರು. ಘಟನೆಯಲ್ಲಿ ಅವರಿಗೆ ಗಾಯವಾಗಿಲ್ಲ.
ದಾಳಿ ನಡೆದ ಮೇಲೂ ಭದ್ರತೆಗಾಗಿ ಅವರು ಕೇಳಿಕೊಂಡಿಲ್ಲ. ಇಂತಹ ದಾಳಿಗೆ ತಾವು ಎದೆಗುಂದುವುದಿಲ್ಲ ಎಂದು ರಾಖಿ ತಿಳಿಸಿದ್ದಾರೆ. ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಿರುಗಿ ಬರುವ ಸಮಯದಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ಪ್ರಕರಣ ದಾಖಲಿಸಿದ್ದು ಯಾರನ್ನೂ ಬಂಧಿಸಿಲ್ಲ.