ಹೈದರಾಬಾದ್: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿತರಾಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಬಾವ ಶ್ರೀನಿವಾಸ ರೆಡ್ಡಿ ಅವರು ಇನ್ನೂ ನಾಲ್ಕು ರಾತ್ರಿಗಳನ್ನು ಸಣ್ಣ ಲಾಕಪ್ನಲ್ಲೇ ಕಳೆಯಬೇಕಿದೆ.
ಇಲ್ಲಿನ ಬಷೀರ್ಬಾಗ್ ಪ್ರದೇಶದಲ್ಲಿರುವ ಪೊಲೀಸ್ ನಿಯಂತ್ರಣ ಕೇಂದ್ರದಲ್ಲಿನ ಕೇಂದ್ರೀಯ ಅಪರಾಧ ಠಾಣೆಯ (ಸಿಸಿಎಸ್) ಸಣ್ಣ ಲಾಕಪ್ನಲ್ಲಿ ಅವರನ್ನು ಮತ್ತು ಓಬಳಾಪುರಂ ಮೈನಿಂಗ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರೂ ಆದ ಶ್ರೀನಿವಾಸ ರೆಡ್ಡಿ ಅವರನ್ನು ಇರಿಸಲಾಗಿದೆ.
ಜನ ನಿಬಿಡವಾದ, ಅಧಿಕ ವಾಹನ ಸಂಚಾರ ಇರುವ ಈ ಪ್ರದೇಶ ಸದಾ ಗಿಜಿಗಿಡುತ್ತಿರುತ್ತದೆ. ಇಲ್ಲಿ ಪದೇ ಪದೇ ಅಪರಾಧ ಎಸಗುವ ಆರೋಪಿಗಳ ವಿಚಾರಣೆಯನ್ನೂ ನಡೆಸಲಾಗುತ್ತದೆ.
ರೆಡ್ಡಿದ್ವಯರು ಬಯಸುವ ಯಾವುದೇ ವಿಶೇಷ ಸೌಲಭ್ಯಗಳು ಇಲ್ಲಿಲ್ಲ. ಕುಖ್ಯಾತ ಅಪರಾಧಿಗಳನ್ನು ಇರಿಸುವ ಇಲ್ಲಿನ ಲಾಕಪ್ಗಳಲ್ಲಿ ಹಾಸಿಗೆಯಾಗಲಿ, ಕೋಣೆಗೆ ಹೊಂದಿಕೊಂಡ ಶೌಚಾಲಯವಾಗಲಿ ಇಲ್ಲ. ನೆಲದ ಮೇಲೆ ಹಾಸಲು ಹೊದ್ದಿಕೆ ಮತ್ತು ದಿಂಬನಷ್ಟೇ ಆರೋಪಿಗಳಿಗೆ ನೀಡಲಾಗಿತ್ತು.
ಚುಂಚುಲಗುಡ ಕಾರಾಗೃಹದಿಂದ ಮಂಗಳವಾರ ಕರೆತಂದ ರೆಡ್ಡಿದ್ವಯರನ್ನು ಕೋಠಿ ಪ್ರದೇಶದಲ್ಲಿರುವ ಸಿಬಿಐನ ಪ್ರಾದೇಶಿಕ ಕಚೇರಿಯಲ್ಲಿ ಕೆಲವು ಸಮಯ ಇರಿಸಲಾಗಿತ್ತು. ಅಲ್ಲೇ ಅವರಿಗೆ ಸಮೀಪದ ಹೋಟೆಲ್ನಿಂದ ಬಿರಿಯಾನಿ, ಬೆಣ್ಣೆಯ ಕೋಳಿ ಮಾಂಸದ ಆಹಾರವನ್ನು ತರಸಿಕೊಡಲಾಯಿತು.
ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಗಳನ್ನು ಆರು ದಿನಗಳ ಮಟ್ಟಿಗೆ ವಿಚಾರಣೆಗಾಗಿ ಸಿಬಿಐ ವಶಕ್ಕೆ ಮಂಗಳವಾರ ನೀಡಿದೆ.