ಕಳಸ: ಮಲೆನಾಡಿಲ್ಲಿ ಮಳೆ ಹೆಚ್ಚಿದಂತೆಲ್ಲಾ ನೈಸರ್ಗಿಕ ಹಸಿರು ಹೊದಿಕೆ ದಟ್ಟವಾಗುತ್ತಾ ಹೋಗುತ್ತದೆ. ಚಳಿಗಾಲದಲ್ಲೂ ಎಲ್ಲೆಲ್ಲೂ ಹಚ್ಚಹಸಿರಿನ ದೃಶ್ಯಾವಳಿ ಕಂಡು ಬರುತ್ತವೆ. ಆದರೆ ಇದೇ ಮಳೆಯು ರೈತರು ನೆಟ್ಟು ಬೆಳೆಸಿದ ತೋಟಗಾರಿಕಾ ಸಸ್ಯಗಳಿಗೆ ಹಾನಿ ಮಾಡುತ್ತದೆ. ಇದಕ್ಕೊಂದು ನಿದರ್ಶನ ಸಿಟ್ರಸ್ ಜಾತಿಗೆ ಸೇರಿದ ನಿಂಬೆ ಮತ್ತು ಕಿತ್ತಳೆ ಗಿಡಗಳು.
ಸೆಪ್ಟೆಂಬರ್ನಲ್ಲೂ ಬೆಂಬಿಡದ ಮಳೆಯ ಬಾಧೆಗೆ ಕಳಸ ಹೋಬಳಿಯ ನಿಂಬೆ ಮತ್ತು ಕಿತ್ತಳೆ ಗಿಡಗಳಲ್ಲಿ ಕಟ್ಟೆ ರೋಗ ವ್ಯಾಪಿಸಿದೆ. ಹಿಂದೆಲ್ಲಾ ಮಳೆಗಾಲದ ಅಂತ್ಯದ ವೇಳೆಗೆ ಅಪರೂಪಕ್ಕೆ ಕಂಡು ಬರುತ್ತಿದ್ದ ಈ ರೋಗ ಈ ಬಾರಿ ತೋಟದಲ್ಲಿ ಇರುವ ಬಹುತೇಕ ಗಿಡಗಳನ್ನು ಬಾಧಿಸುತ್ತಿದೆ.
ನಿಂಬೆ, ಕಿತ್ತಳೆ ಗಿಡಗಳ ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿದ್ದು ಉದುರಲಾರಂಭಿಸಿವೆ. ಗಿಡಗಳಲ್ಲಿ ಕಡ್ಡಿ ಮಾತ್ರ ಉಳಿದು ಅವುಗಳ ಅಂತ್ಯಕಾಲದ ಬಗ್ಗೆ ಸುಳಿವು ನೀಡುತ್ತಿದೆ. ಹಿಂದೆಲ್ಲಾ ದೊಡ್ಡ ಗಿಡಗಳನ್ನು ಬಾಧಿಸುತ್ತಿದ್ದ ಈ ರೋಗ ಈಗ ಎಳೆ ಗಿಡಗಳನ್ನೂ ಆಹುತಿ ತೆಗೆದುಕೊಳ್ಳುತ್ತಿದೆ. ಶಿಲೀಂಧ್ರದ ಉಪಟಳದಿಂದಾಗಿ ಈ ರೋಗ ಉಲ್ಬಣಿಸುತ್ತಿದೆ. ಆದರೆ ರೋಗದ ನಿಯಂತ್ರಣಕ್ಕೆ ರೈತರಿಗೆ ಯಾವುದೇ ಪರಿಹಾ ರೋಪಾಯಗಳು ಕಂಡು ಬರುತ್ತಿಲ್ಲ.