ಲಿಂಗಸುಗೂರ(ಮುದಗಲ್ಲ): ಧರ್ಮ ಮತ್ತು ಜಾತಿಯ ಸಂಕೋಲೆಗಳನ್ನು ಮೀರಿ ಒಂದು ಗೂಡಿಸುವ ಕ್ರೀಡೆಗಳು ಯುವಕರ ಸದೃಢ ಆರೋಗ್ಯಕ್ಕೆ ಪೂರಕವಾಗಿವೆ. ಅಲ್ಲದೆ, ರಾಜ್ಯ ಮತ್ತು ರಾಷ್ಟ್ರಗಳ ಸುಮಧುರ ಬಾಂಧವ್ಯ ಬೆಸೆದು ರಾಷ್ಟ್ರೀಯ ಮನೋಭಾವ ಮೂಡಿಸಲು ಸಹಕಾರಿ ಆಗಿವೆ ಎಂದು ಪದವಿ ಕಾಲೇಜು ಪ್ರಾಚಾರ್ಯ ಎನ್. ನೂರಭಾಷಾ ಅಭಿಮತ ವ್ಯಕ್ತಪಡಿಸಿದರು.
ಬುಧವಾರ ಕನ್ನಾಪುರಹಟ್ಟಿ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ 24ನೇ ವಿಭಾಗೀಯ ಬಾಸ್ಕೆಟ್ ಬಾಲ್ ಕ್ರೀಡಾಕೂಟ ಉದ್ದೇಶಿಸಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರಿಂದ ಕ್ರಿಯಾಶೀಲತೆ ಹೆಚ್ಚುತ್ತದೆ. ಈ ಹಿಂದೆಯು ಕೂಡ ರಾಜ, ಮಹಾರಾಜರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದನ್ನು ಉಲ್ಲೇಖಿಸಿದರು.
ಡಾ. ಶಿವಬಸಪ್ಪ ಹೆಸರೂರ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿದರು. ಪದವಿ ಕಾಲೇಜು ಪ್ರಾಚಾರ್ಯ ನೂರಭಾಷಾ ಕ್ರೀಡಾಜ್ಯೋತಿ ಸ್ವೀಕರಿಸಿದರು. ಪಾಲಕರ ಪ್ರತಿನಿಧಿ ಲಿಂಗಪ್ಪ ಪರಂಗಿ, ನವೋದಯ ವಿದ್ಯಾಲಯದ ಪ್ರಾಚಾರ್ಯ ಸಿ.ಕೆ. ಸಸೀಂದ್ರನ್, ಉಪ ಪ್ರಾಚಾರ್ಯ ಜಿ.ಎಸ್. ರವಿಕುಮಾರ ಮತ್ತಿತರರು ಪಾಲ್ಗೊಂಡಿದ್ದರು.