ಹೊಳಲ್ಕೆರೆ: ತಮ್ಮ ಶಿಷ್ಯಕೋಟಿಗೆ ಜ್ಞಾನದಾಸೋಹ ಉಣಬಡಿಸಿ, ಸನ್ಮಾರ್ಗದತ್ತ ಕೊಂಡೊಯ್ಯುವನೇ ನಿಜವಾದ ಗುರು ಎಂದು ಚಿತ್ರದುರ್ಗ ಮುರಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಈಚೆಗೆ ನಡೆದ ರಾಘವೇಂದ್ರ ಸ್ವಾಮೀಜಿ ಅವರ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆ ಅತ್ಯಂತ ಶ್ರೇಷ್ಠವಾದುದು. ನಿಜವಾದ ಗುರು ತಾನೊಬ್ಬನೇ ಜ್ಞಾನ ಸಂಪಾದನೆ ಮಾಡಲು ಇಚ್ಛಿಸುವುದಿಲ್ಲ. ತಾನು ಪಡೆದುಕೊಂಡ ಜ್ಞಾನ ಮತ್ತು ಅನುಭವಗಳನ್ನೆಲ್ಲ ಶಿಷ್ಯರಿಗೆ ಧಾರೆ ಎರೆಯುತ್ತಾನೆ. ಅಧ್ಯಾತ್ಮದ ಮಾರ್ಗದಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುತ್ತಾನೆ. ಇಲ್ಲಿನ ಅನಾಥ ಸೇವಾಶ್ರಮ ಕಟ್ಟಿ ಬೆಳೆಸಿದ ರಾಘವೇಂದ್ರ ಸ್ವಾಮೀಜಿ ಕೂಡ ಇದೇ ಮಾರ್ಗದಲ್ಲಿ ನಡೆದರು ಎಂದು ಸ್ಮರಿಸಿದರು.
ಈಚೆಗೆ ಗುರುಗಳಲ್ಲಿಯೂ ಸ್ವಾರ್ಥ, ದುರಾಸೆ ಮನೆಮಾಡುತ್ತಿವೆ. ತಾನು ಕಲಿತ ವಿದ್ಯೆಯನ್ನು ಶಿಷ್ಯವೃಂದಕ್ಕೆ ವರ್ಗಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ. ಎಂದು ವಿಷಾದಿಸಿದರು.
ಲೋಕಸಭಾ ಸದಸ್ಯ ಜನಾರ್ದನ ಸ್ವಾಮಿ ಮಾತನಾಡಿ, ನಮ್ಮ ದೇಶ ಅನೇಕ ಸಂಶೋಧಕರು, ವಿಜ್ಞಾನಿಗಳನ್ನು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದೆ. ಆದರೆ, ಈಚೆಗೆ ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಇನ್ನೂ ಹೆಚ್ಚಿನ ಸಂಶೋಧಕರು ರೂಪುಗೊಳ್ಳಬೇಕಿದೆ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಎಲ್ಲರ ಆಶಯ, ಪ್ರೋತ್ಸಾಹಗಳಿಂದ ಆಶ್ರಮ ಬೆಳೆಯುತ್ತಿದೆ. ರಾಘವೇಂದ್ರ ಸ್ವಾಮೀಜಿ ಅವರು ಜೋಳಿಗೆ ಹಿಡಿದು, ಭಿಕ್ಷೆ ಬೇಡಿ ಕಟ್ಟಿದ ಆಶ್ರಮ ಸದಾ ಕಾಲಕ್ಕೂ ಬೆಳಗುತ್ತಿರಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ ಎಂದರು.
ಜಿ.ಪಂ. ಸದಸ್ಯೆ ಭಾರತೀ ಕಲ್ಲೇಶ್, ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಪ್ರೊ.ವೆಂಕಟಗಿರಿ ದಳವಾಯಿ, ಟಿ.ಪಿ. ಬಸವರಾಜ್, ಡಾ.ಉಮೇಶ್, ಸಹಾಯಕ ಆಡಳಿತಾಧಿಕಾರಿ ಕೆ.ಡಿ. ಬಡಿಗೇರ, ಎಲ್.ಎಸ್. ಶಿವರಾಮಯ್ಯ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.