ರಾಮನಾಥಪುರ: ಸಮಾನತೆಯ ಹರಿಕಾರ ಕನಕದಾಸರು ಅಮೂಲ್ಯ ಕೀರ್ತನೆಗಳ ಮೂಲಕ ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದ ಶ್ರೇಷ್ಠ ದಾರ್ಶನಿಕ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ ನುಡಿದರು.
ಬೆಟ್ಟಸೋಗೆ ಗ್ರಾಮದಲ್ಲಿ 525ನೇ ಕನಕ ಜಯಂತಿ ಪ್ರಯುಕ್ತ ಶನಿವಾರ ಸಂಜೆ ನಡೆದ `ರಾಜಸತ್ಯವೃತ ಅಥವಾ ಶನಿಪ್ರಭಾವ' ಎಂಬ ಪೌರಾಣಿಕ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಜಾತಿಪದ್ಧತಿ ಸಮಾಜಕ್ಕೆ ಅಂಟಿದ ಕೆಟ್ಟ ಶಾಪ. ಜಾತಿಯತೆ ಅಳಿದರೆ ಮಾತ್ರ ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಬೂದನೂರು ಅಣ್ಣೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಲಕ್ಷ್ಮಣ್, ಬಸವಾಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಜಯಕುಮಾರ್, ಮುಖಂಡರಾದ ಸೋಂಪುರ ಚಿಕ್ಕೇಗೌಡ, ಕಾಳೇಗೌಡ, ಸೋಮಶೇಖರಯ್ಯ, ಬಿ.ಸಿ. ನಟರಾಜ್, ಬಾಗೇಗೌಡ, ಮಹದೇವು, ಕಾಳಯ್ಯ, ಮಲ್ಲಯ್ಯ, ದ್ಯಾವಯ್ಯ ಇದ್ದರು.
ಬ್ರಾಹ್ಮಣ ಸಮಾಜದ ಬಾಲಕೃಷ್ಣ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿದರು. ನಿವೃತ್ತ ಶಿಕ್ಷಕ ವೀರೇಶ್ ಸ್ವಾಗತಿಸಿದರು.