ಗಜೇಂದ್ರಗಡ: ಪಟ್ಟಣದಲ್ಲಿ ಫೆ.11ರಿಂದ 13ರ ವರೆಗೆ ನಡೆಯಲಿರುವ ಗದಗ ಜಿಲ್ಲಾ 4ನ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಗುರುವಾರ ಸ್ಥಳೀಯ ಆಟೋ ಮತ್ತು ಟೆಂಪೋ ಚಾಲಕರ ಸಂಘ, ಕರವೇ ಕಾರ್ಯಕರ್ತರು ಜಾಗೃತಿ ರ್ಯಾಲಿ ನಡೆಸಿದರು.
50ಕ್ಕೂ ಹೆಚ್ಚಿನ ವಾಹನಗಳಿಗೆ ಕನ್ನಡ ಧ್ವಜ ಕಟ್ಟಿಕೊಂಡು ಇಲ್ಲಿನ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿದರು. ಮೂರು ದಿನಗಳ ವರೆಗೆ ಇಲ್ಲಿ ಕನ್ನಡದ ಝೆಂಕಾರ ಮೊಳಗಿಸಲು ಸಕಲ ಸಿದ್ಧತೆಗಳು ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಆಸಕ್ತರು, ಎಲ್ಲ ಕನ್ನಡ ಮನಸುಗಳು ಅಕ್ಷರ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ರಕ್ಷಣಾ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್. ಸೋಂಪೂರ ತಿಳಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಬಿ. ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎ.ಕೆಂಚರಡ್ಡಿ, ಪುರಸಭೆ ಸದಸ್ಯ ಅಂಬರೀಶ ಅರಳಿ, ಸಂಗಪ್ಪ ಚಲವಾದಿ, ಆಟೋ ಚಾಲಕರು, ಟೆಂಪೋ ಚಾಲಕರು ಪಾಲ್ಗೊಂಡಿದ್ದರು.