ದೊಡ್ಡಬಳ್ಳಾಪುರ: ತಾಲ್ಲೂಕಿನ ಕಲ್ಲೂಡು ಗ್ರಾಮದ ಸಿದ್ದಗಂಗಯ್ಯ ಅವರ ಎಮ್ಮೆ ಸಯಾಮಿ ಕರುಗಳಿಗೆ ಜನ್ಮ ನೀಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ವಿಪರ್ಯಾಸ ಎಂಬಂತೆ ಸಯಾಮಿ ಕರುಗಳಲ್ಲಿ ಒಂದು ಕರು ಹುಟ್ಟುವಾಗಲೇ ಮೃತಪಟ್ಟಿದೆ. ಮತ್ತೊಂದು ಕರು ಆರೋಗ್ಯವಾಗಿದ್ದರೂ ಸತ್ತ ಕರು ಶರೀರಕ್ಕೆ ಅಂಟಿಕೊಂಡಿರುವುದರಿಂದ ಮೃತ ಕರುವನ್ನೇ ಎಳೆಯುತ್ತಾ ನರಕಯಾತನೆ ಅನುಭವಿಸುತ್ತಿದೆ.
ಎಮ್ಮೆಯು ಬುಧವಾರ ರಾತ್ರಿ 11ಗಂಟೆ ಸಮಯದಲ್ಲಿ ಈ ಸಯಾಮಿ ಕರುಗಳಿಗೆ ಜನ್ಮ ನೀಡಿದೆ. ಹುಟ್ಟಿದಾಗ ಎರಡೂ ಕರುಗಳು ಬದುಕಿದ್ದವು. ಸ್ವಲ್ಪ ಸಮಯದ ನಂತರ ಅವುಗಳಲ್ಲಿ ಒಂದು ಕರು ಮೃತಪಟ್ಟಿತು. ಈ ಕರುವಿಗೆ 8 ಕಾಲು, ಎರಡು ದೇಹ (ಅಂಟಿಕೊಂಡಂತೆ), ಎರಡು ಬಾಲ ಇವೆ. ಗುದದ್ವಾರ ಒಂದೇ ಇದೆ.
ಬದುಕಿರುವ ಕರುವಿಗೆ ಸಿದ್ದಗಂಗಯ್ಯ, ಬಾಟಲಿಯಲ್ಲಿ ಹಾಲು ಕುಡಿಸುತ್ತಿದ್ದಾರೆ. ಸಯಾಮಿ ಕರುಗಳನ್ನು ಪರೀಕ್ಷಿಸಿದ ಸ್ಥಳೀಯ ವೈದ್ಯರು ಎರಡು ಕರುಗಳನ್ನೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.