ಯಾದಗಿರಿ: ‘ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ ಸಂಘ ಒಕ್ಕೋಟದ ಅಧ್ಯಕ್ಷ ರಾಮಕೃಷ್ಣ ಪೂಂಜಾ ಆರೋಪಿಸಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಮಜ್ದೂರ್ ಸಂಘದ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರು ಮನಸ್ಸು ಮಾಡಿದರೆ ಸರ್ಕಾರಕ್ಕೆ ಕುತ್ತು ಎನ್ನುವುದ್ದನ್ನು ಮರೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾರ್ಮಿಕರ ಕಲ್ಯಾಣ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಹೇಳಿದರು.
ಸಾರಿಗೆ ಸಂಸ್ಥೆಯಲ್ಲಿನ ನೌಕರರ ವರ್ಗಾವಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕಾರ್ಮಿಕರ ಬೆವರಿನಿಂದ ಕಟ್ಟಿದ ಸಂಸ್ಥೆ ಎಂಬುದನ್ನು ಸರ್ಕಾರ ಮರೆಯುತ್ತಿದೆ. ಕಾರ್ಮಿಕ ಕ್ಷೇತ್ರದಲ್ಲಿ ಅತಿದೊಡ್ಡ ಸಂಘಟನೆಯಾಗಿ ಮಜ್ದೂರ್ ಸಂಘ ಹೊರ ಹೊಮ್ಮಿದೆ ಎಂದು ಹೇಳಿದರು.
ಜಿ.ವಿ.ಮಠ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕಾರ್ಮಿಕ ಸಂಘಟನೆಗಳ ಮುಖಂಡರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದು ಸಂಘಟನೆಯನ್ನು ಒಡೆಯುವ ಕೆಲಸ ಎಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಇಟಗಿ, ದಯಾನಂದ ಸಾಗರ, ಮಹಾದೇವಯ್ಯ, ಎಸ್.ವಿ.ಕೊಪ್ಪದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನಪ್ಪಾಜೀ, ವಿಜಯಕುಮಾರ, ರಾಚೋಟೆಪ್ಪ, ಸೋಮಶೇಖರ ಸಜ್ಜನ್, ಗೊಲ್ಲಾಳಪ್ಪ ಇದ್ದರು.