ನವದೆಹಲಿ (ಐಎಎನ್ ಎಸ್): ದೆಹಲಿಯಲ್ಲಿ ಸರ್ಕಾರ ರಚನೆಗೆ ತನಗೆ ಸಂಖ್ಯಾಬಲದ ಕೊರತೆ ಇದೆ ಎಂಬುದಾಗಿ ಶುಕ್ರವಾರ ಹೇಳಿರುವ ಆಮ್ ಆದ್ಮಿ ಪಕ್ಷವು (ಎಎಪಿ) ಈ ನಿರ್ಣಯವನ್ನು ಶನಿವಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ತಿಳಿಸಲಾಗುವುದು ಎಂದು ಪ್ರಕಟಿಸಿದೆ.
70 ಸದಸ್ಯಬಲದ ಸದನದಲ್ಲಿ ನಮಗೆ ಬಹುಮತದ ಬೆಂಬಲವಿಲ್ಲ, ಅಥವಾ ನಾವು ಪ್ರಥಮ ಸ್ಥಾನದಲ್ಲೂ ಇಲ್ಲ ಎಂದು ಪಕ್ಷದ ನಾಯಕ ಯೋಗೇಂದ್ರ ಯಾದವ್ ಅವರು ಮಾಧ್ಯಮಗಳಿಗೆ ತಿಳಿಸಿದರು.
ಲೆಫ್ಟಿನೆಂಟ್ ಗವರ್ನರ್ ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವಂತೆ ಪಕ್ಷಕ್ಕೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಎಎಪಿ ಸ್ಥಾಪಕ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡುವರು ಎಂದು ಯಾದವ್ ನುಡಿದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 31 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಗೆದ್ದ ಭಾರತೀಯ ಜನತಾ ಪಕ್ಷವು (ಬಿಜೆಪಿ) ತಾನು ಸರ್ಕಾರ ರಚಿಸಲಾಗದು ಎಂದು ಗುರುವಾರ ಸ್ಪಷ್ಟ ಪಡಿಸಿತ್ತು.
ಎರಡನೇ ಸ್ಥಾನದಲ್ಲಿರುವ ಆಮ್ ಆದ್ಮಿ ಪಕ್ಷವು 28 ಸ್ಥಾನಗಳನ್ನು ಗೆದ್ದಿತ್ತು.