ಕೃಷ್ಣರಾಜಪುರ: ಕೌದೇನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನನ್ನು (ಸರ್ವೆ ಸಂಖ್ಯೆ 95/3) ಹಲವು ವರ್ಷಗಳ ಹೋರಾಟದ ನಂತರ ತೆರವುಗೊಳಿಸಲಾಗಿದೆ. ಈಗ ಬಿಬಿಎಂಪಿ ಸುಪರ್ದಿಯಲ್ಲಿರುವ ಈ ಜಮೀನಿನಲ್ಲಿ ಸರ್ಕಾರಿ ಕಾಲೇಜು ನಿರ್ಮಾಣ ಮಾಡಬೇಕು ಎಂದು ರಾಮಮೂರ್ತಿನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆಂಜಿನಪ್ಪ ಶಾಸಕರಿಗೆ ಒತ್ತಾಯಿಸಿದರು.
ವಾರ್ಡ್ ಸಭೆಯಲ್ಲಿ ಅವರು ಮಾತನಾಡಿದರು. ಶಾಸಕ ಎನ್.ಎಸ್.ನಂದೀಶ ರೆಡ್ಡಿ ಮಾತನಾಡಿ, ಸರ್ಕಾರಿ ಸ್ವತ್ತನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡಲಾಗುವುದು. ಜನೋಪಯೋಗಿ ಬಳಕೆಗೆ ಸಂಬಂಧಿಸಿದಂತೆ ವಾರ್ಡ್ ಅಧ್ಯಕ್ಷರು ಮತ್ತು ಬಿಬಿಎಂಪಿ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವಂತೆ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು.
ತೂಗು ಸೇತುವೆಯ ಕೆಳ ಸೇತುವೆ ಮಾರ್ಗ ಅತ್ಯಂತ ಕಿರಿದಾಗಿದ್ದು ತೊಂದರೆ ಆಗುತ್ತಿದೆ. ಇದನ್ನು ಹಾಗೆಯೇ ಉಳಿಸಿಕೊಂಡು ಮಹದೇವಪುರ ವರ್ತುಲ ರಸ್ತೆಯಿಂದ ಕೆ.ಆರ್. ಪುರದ ಐಟಿಐ ಮುಖ್ಯ ದ್ವಾರದ ವರೆಗೆ ಎರಡು ಪಥಗಳ ಕೆಳ ಸೇತುವೆ ಮಾರ್ಗವನ್ನು ನಿರ್ಮಿಸಲಾಗುವುದು ಎಂದರು.
ವೇಣುಗೋಪಾಲ್, ಶಿವಕುಮಾರ್, ಶ್ರಿನಿವಾಸ ರೆಡ್ಡಿ, ಕೃಷ್ಣಮೂರ್ತಿ , ಸುಕುಮಾರ್, ಬಾಕ್ಸರ್ ನಾಗರಾಜ್, ಶಾಂತರಾಜ ಅರಸ್, ಬಿ.ಹೆಚ್ ಗಣೇಶ ರೆಡ್ಡಿ, ಸಹಾಯರಾಜ್, ಶಿವರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.