ಲಿಂಗಸುಗೂರ: ತಾಲ್ಲೂಕಿನಾದ್ಯಂತ ಬಹುತೇಕ ಯೋಜನೆಗಳಡಿ ಸಾವಿರಾರು ಎಕರೆ ಜಮೀನನ್ನು ಸ್ವಾಧೀನಪಡೆಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಜಮೀನುಗಳ ಪಹಣಿ ಪತ್ರಿಕೆಯ (ಆರ್ಟಿಸಿ) ಕಾಲಂ 9ರಲ್ಲಿ ಮಾಲೀಕರ ಹೆಸರು ವಜಾ ಮಾಡಿ ಸರ್ಕಾರ ಎಂದು ನಮೂದಿಸಬೇಕು.
ಆದರೆ, ಕಂದಾಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರ ಹೆಸರು ಮುಂದುವರಿದಿರುವುದು ಹಲವು ಆವಾಂತರಗಳನ್ನು ಹುಟ್ಟು ಹಾಕಿದ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಿಲಾನಿಪಾಷ ಆಗ್ರಹಿಸಿದ್ದಾರೆ.
ತುಂಗಭದ್ರ ಯೋಜನೆಯಡಿ ಎಡದಂಡೆ ಮುಖ್ಯ ನಾಲೆ ನಿರ್ಮಾಣ, ನಾರಾಯಣಪುರ ಬಲದಂಡೆ ಮುಖ್ಯ ನಾಲೆ ನಿರ್ಮಾಣ, ರಾಂಪೂರ-ನವಲಿ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ, ಗುಂತಗೋಳ ಏತ ನೀರಾವರಿ ಯೋಜನೆ, ಜಲದುರ್ಗ ಏತ ನೀರಾವರಿ ಯೋಜನೆ, ಘನಮಠೇಶ್ವರ (ಮಸ್ಕಿ) ನಾಲಾ ಯೋಜನೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದೆ.
4(1) ನೋಟಿಫಿಕೇಶನ್, 6(1) ಫೈನಲ್ ಆರ್ಡರ್ ಆಗಿ ನಿಯಮಾನುಸಾರ ಹಣ ಪಾವತಿಸಿದ ಬಗ್ಗೆ ದಾಖಲೆಗಳು ಸ್ಪಷ್ಟಪಡಿಸುತ್ತವೆ.ಮೇಲ್ಕಾಣಿಸಿದ ಯೋಜನೆಗಳಡಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಅವುಗಳ ಭೂ ಕಂದಾಯ ಮನ್ನಾ ಮಾಡಲು ಸ್ವತಃ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಆಯಾ ಅವಧಿಯಲ್ಲಿ ಜಮಾಬಂದಿ ಮೂಲಕ ಮನವಿ ಸಲ್ಲಿಸಿದ್ದಾರೆ.
ಆ ಜಮೀನುಗಳ ಭೂ ಕಂದಾಯ ಕೂಡ ಮನ್ನಾ ಮಾಡಲಾಗಿದೆ. ಭೂ ಕಂದಾಯ ಮಾಡಿರುವ ಜಮೀನುಗಳ ಮಾಲೀಕತ್ವದ ಪಹಣಿ ಕಾಲಂ 9ರಲ್ಲಿ ಮಾಲೀಕರ ಹೆಸರು ಮುಂದುವರಿದಿದ್ದರಿಂದ ಬೆಲೆ ಬಾಳುವ ಜಮೀನುಗಳನ್ನು ಪುನಃ ಅವರ ವಾರಸುದಾರರು ಮಾರಾಟ ಮಾಡಿಕೊಂಡಿರುವ ಹಲವು ನಿದರ್ಶನಗಳಿವೆ ಎಂದು ಆರೋಪಿಸಿದ್ದಾರೆ.
ವಿಧಾನಸಭೆ ಕ್ಷೇತ್ರವಾಗಿರುವ ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರ ಎಂದು ಘೋಷಿಸಿಕೊಳ್ಳಲಿರುವ ಮಸ್ಕಿ ಸುತ್ತಮುತ್ತಲ ಜಮೀನು ಇಂತಹ ಹಗರಣಕ್ಕೆ ಒಂದು ಕೈಗನ್ನಡಿಯಾಗಿದೆ. ತುಂಗಭದ್ರ ಮುಖ್ಯ ಕಾಲುವೆ, ಕಚೇರಿ ಮತ್ತು ವಸತಿ ಗೃಹ ನಿರ್ಮಿಸಲು 1958-59 ರಿಂದ 1961-62ರ ಅವಧಿಯಲ್ಲಿ ಅಂದಾಜು 943 ಎಕರೆಯಷ್ಟು ಜಮೀನನ್ನು ಸ್ವಾಧೀನ ಕಾಯ್ದೆಯಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಮಾಲೀಕರ ಹೆಸರು ವಜಾ ಮಾಡದೆ ಹೋಗಿದ್ದರಿಂದ ಕಳೆದ ಐದಾರು ವರ್ಷಗಳಲ್ಲಿ ಸ್ವಾಧೀನಪಡಿಸಿಕೊಂಡ ಜಮೀನು ಮಾರಾಟ ಮಾಡುವ ಜಾಲ ಹುಟ್ಟಿಕೊಂಡಿದೆ ಎಂದು ದೂರಿದ್ದಾರೆ.ಮಸ್ಕಿ ಪಟ್ಟಣದ ಸುತ್ತಮುತ್ತ ತುಂಗಭದ್ರಾ ಮುಖ್ಯ ಕಾಲುವೆಗೆ ಸ್ವಾಧೀನಪಡಿಸಿಕೊಂಡ ಜಮೀನು ಎಕರೆಗೆ ರೂ. 30 ರಿಂದ 35ಲಕ್ಷ ಬೆಲೆ ಬಾಳುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಮಾಲೀಕರ ವಾರಸುದಾರರು ಅಂತಹ ಜಮೀನುಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರು ಕೃಷಿಯೇತರ ಜಮೀನಾಗಿ ಪರಿವರ್ತಿಸಿ ಲಕ್ಷಗಟ್ಟಲೆ ಬೆಲೆಗೆ ನಿವೇಶನ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಕ್ರಮ ಕೃತ್ಯಗಳಿಗೆ ಕಂದಾಯ ಇಲಾಖೆ ಪ್ರೋತ್ಸಾಹಿಸುತ್ತ ಬಂದಿದ್ದು, ತಾಲ್ಲೂಕಿನಾದ್ಯಂತ ವಿವಿಧ ಯೋಜನೆಗಳಡಿ ಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.
ಅಕ್ರಮವಾಗಿ ಭೂಸ್ವಾಧೀನ ಜಮೀನು ಮಾರಾಟ ಅಥವಾ ಕೃಷಿಯೇತರ ಜಮೀನಾಗಿ ಪರಿವರ್ತಿಸಿಕೊಂಡ ಮಾಲೀಕರು ಮತ್ತು ಸಹಕರಿಸಿದ ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲಾನಿಪಾಷ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.