ಬಸವಕಲ್ಯಾಣ: ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದೆ ಸರ್ಕಾರಿ ಶಾಲೆಗಳ ಕಡೆಗೆ ಮುಖ ಮಾಡುವಂತೆ ಶಿಕ್ಷಕರು ಮತ್ತು ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.
ಇಲ್ಲಿನ ಸಸ್ತಾಪುರ ರಸ್ತೆಯಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ವಿದೇಶದಲ್ಲಿ ಖಾಸಗಿ ಶಾಲೆಗಳ ಬಗ್ಗೆ ಯಾರೂ ಒಲವು ತೋರುವುದಿಲ್ಲ. ಸರ್ಕಾರಿ ಶಾಲೆಯಲ್ಲಿ ಪ್ರವೇಶ ದೊರೆತರೆ ಅಲ್ಲಿನವರಿಗೆ ಬಹಳಷ್ಟು ಖುಷಿ ಆಗುತ್ತದೆ. ಅಂಥ ವಾತಾವರಣ ಇಲ್ಲಿ ನಿರ್ಮಾಣ ಆಗಲಿ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲತಾ ಹಾರಕೂಡೆ ಮಾತನಾಡಿದರು.`ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇತರೆ ಸಂಬಂಧಿತ ಅಧಿಕಾರಿಗಳು ಮತ್ತು ಶಿಕ್ಷಕರು ಶೈಕ್ಷಣಿಕ ವಾತಾವರಣ ಸುಧಾರಣೆಗೆ ಹೆಚ್ಚಿನ ಕಾಳಜಿ ತೋರುವ ಅವಶ್ಯಕತೆ ಇದೆ' ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಣ್ಣ ಸ್ವಾಮಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ ಮೋರೆ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರರೆಡ್ಡಿ ಗೋಕುಳ, ನಗರಸಭೆ ಆಯುಕ್ತ ಸುರೇಶ ಬಬಲಾದ, ತಹಸೀಲ್ದಾರ ವೆಂಕಟಯ್ಯ, ಮುಖಂಡರಾದ ಕೇಶಪ್ಪ ಬಿರಾದಾರ, ಶಬ್ಬೀರಪಾಶಾ, ಸುಧಾಕರ ಮದನೆ, ಕಾಳಿದಾಸ ಜಾಧವ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ ಪತಂಗೆ ಉಪಸ್ಥಿತರಿದ್ದರು. ಶಿಕ್ಷಕ ಅನಂತ ಬಂಡಿ ನಿರೂಪಿಸಿದರು.