ಧಾರವಾಡ: `ಎರಡು ಲಕ್ಷ ಹೆಕ್ಟೇರ್ ಸವಳು ಭೂಮಿಯನ್ನು 606 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ~ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಇಲ್ಲಿ ಹೇಳಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಮಣ್ಣು ವಿಜ್ಞಾನ ಸಂಸ್ಥೆಯ ಅಖಿಲ ಭಾರತ ಮಟ್ಟದ 76ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ 88 ಹೆಕ್ಟೇರ್ ಸವಳು ಭೂಮಿಯ ಪುನರುಜ್ಜೀನಗೊಳಿಸವ ಕೆಲಸ ಪ್ರಗತಿಯಲ್ಲಿದೆ. 6,000 ಹೆಕ್ಟೇರ್ ಪ್ರದೇಶದ ಸವಳು ಭೂಮಿಯ ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಈ ಭೂಮಿಯನ್ನು ಫಲವತ್ತತೆ ಮಾಡುವ ಮೂಲಕ ಮತ್ತೆ ಉತ್ತಮ ಇಳುವರಿ ಪಡೆಯುವಂತೆ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.
ಪ್ರಪಂಚದ ಶೇ 17.5 ರಷ್ಟು ಜನಸಂಖ್ಯೆ ಭಾರತದಲ್ಲಿದ್ದು, ಅವರ ಆಹಾರಕ್ಕಾಗಿ ಸುಸ್ಥಿರ ಕೃಷಿಯ ಅವಶ್ಯಕತೆ ಇದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಉಪ ಮಹಾ ನಿರ್ದೇಶಕ (ನೈಸರ್ಗಿಕ ಸಂಪನ್ಮೂಲ ನಿರ್ವಹಣೆ) ಡಾ. ಎ.ಕೆ.ಸಿಂಗ್ ಹೇಳಿದರು.
ಅಖಿಲ ಭಾರತ ಮಣ್ಣು ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಪಿ.ಸಿಂಗ್ ಮಾತನಾಡಿದರು. ಕುಲಪತಿ ಡಾ. ಆರ್.ಆರ್.ಹಂಚಿನಾಳ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಸೀಮಾ ಮಸೂತಿ, ಡಾ. ನಿರ್ಮುತ್, ಸಂಗು ಅಂಗಡಿ, ಡಾ. ವಂದನಾ ದ್ವಿವೇದಿ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿರುವ 450 ವಿಜ್ಞಾನಿಗಳು ಹಾಜರಿದ್ದರು. ಡಾ. ಎಂ.ಬಿ.ಚೆಟ್ಟಿ ಸ್ವಾಗತಿಸಿದರು. ಡಾ. ಜಿ.ಎಸ್.ದಾಸೋಗ ವಂದಿಸಿದರು. ಶಕುಂತಲಾ ನಿರೂಪಿಸಿದರು.