ಬೆಂಗಳೂರು: ಬ್ರೆಜಿಲ್ ದೇಶದ ಮೀನಸ್ ಜೆರಾಯ್ಸ ರಾಜ್ಯದ ಗವರ್ನರ್ ಅಂಟೊನಿಯೊ ಅಗಸ್ಟೊ ಅನಸ್ಟಾಸಿಯಾ ನೇತೃತ್ವದ ನಿಯೋಗ ಗುರುವಾರ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರದ ಜತೆ ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಮಾಡಿತು.
ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಮೀನಸ್ ರಾಜ್ಯದ ಅಧಿಕಾರಿಗಳು ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಹಾಕಿದರು.
ರಾಜ್ಯದ ಪರವಾಗಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಜರಿದ್ದರು. ನಂತರ ಅವರು ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ಅನಸ್ಟೇಸಿಯಾ ಅವರನ್ನು ಪ್ರಾರಂಭದಲ್ಲಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದು, ಅದರ ಉಪಯೋಗ ಪಡೆದುಕೊಳ್ಳಬೇಕೆಂದು ನಿರಾಣಿ ಕರೆ ನೀಡಿದರು. 2012ರ ಜೂನ್ ತಿಂಗಳಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡಿದ್ದು, ಅದರಲ್ಲಿ ಭಾಗವಹಿಸುವಂತೆಯೂ ಆಹ್ವಾನ ನೀಡಿದರು.
ಕತ್ತಲು ಸವಿದ ವಿದೇಶಿ ನಿಯೋಗ
ಬೆಂಗಳೂರು: ರಾಜ್ಯಕ್ಕೆ ಬಂಡವಾಳ ಹೂಡಲು ಬನ್ನಿ ಎಂದು ವಿದೇಶಿ ನಿಯೋಗದ ಜತೆ ಮಾತುಕತೆ ನಡೆಸುವ ವೇಳೆಯೇ ಎರಡು ಬಾರಿ ವಿದ್ಯುತ್ ಕೈಕೊಟ್ಟ ಘಟನೆ ಗುರುವಾರ ವಿಧಾನಸೌಧದಲ್ಲಿ ನಡೆಯಿತು.
ಬ್ರೆಜಿಲ್ ನಿಯೋಗ ರಾಜ್ಯಕ್ಕೆ ಬಂದಿದ್ದು, ಅದರ ಜತೆ ಸಚಿವ ಮುರುಗೇಶ ನಿರಾಣಿ ಮಾತುಕತೆ ನಡೆಸುತ್ತಿದ್ದರು. ರಾಜ್ಯದಲ್ಲಿ ಬಂಡವಾಳ ಹೂಡಲು ವಿಪುಲ ಅವಕಾಶ ಇದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಹೀಗೆ ಹೇಳುವಾಗಲೇ ವಿದ್ಯುತ್ ಕೈಕೊಟ್ಟಿತು.
ಸಮ್ಮೇಳನ ಸಭಾಂಗಣ ಕತ್ತಲಲ್ಲಿ ಮುಳುಗಿತು. 3-4 ನಿಮಿಷದ ನಂತರ ವಿದ್ಯುತ್ ಮತ್ತೆ ಬಂತು. ಆಗ ನಿಯೋಗದಲ್ಲಿದ್ದ ವಿದೇಶಿ ಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಿಟ್ಟುಸಿರೂ ಬಿಟ್ಟರು. ಹೀಗೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿದ್ದು, ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಯನ್ನು ಪ್ರತಿಬಿಂಬಿಸುವಂತಿತ್ತು.