ಚನ್ನಪಟ್ಟಣ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಸಗೊಬ್ಬರಕ್ಕೆ ಬೇಡಿಕೆ ಬಂದಿದೆ. ಹೀಗಾಗಿ ಅಗತ್ಯರಸಗೊಬ್ಬರವನ್ನು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿ.ಎಪಿಸಿಎಂಎಸ್) ಮೂಲಕವೇ ವಿತರಿಸುವಂತೆ ಸಂಘದ ಸದಸ್ಯರು ಆಗ್ರಹಿಸಿದರು.
ಶನಿವಾರ ಪಟ್ಟಣದ ಸಾತನೂರು ರಸ್ತೆಯಲ್ಲಿರುವ ಟಿಎಪಿಎಂಎಸ್ ಅಕ್ಕಿ ಗಿರಣಿ ಆವರಣದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಈ ಒತ್ತಾಯ ಮಾಡಿದರು.
ಯೂರಿಯಾ ರಸಗೊಬ್ಬರ ಅತ್ಯಂತ ಅಗತ್ಯವಾಗಿದೆ. ಎಲ್ಲೂ ದೊರೆಯದ ಕಾರಣ ಖಾಸಗಿ ವಿತರಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ಹಾಗಾಗಿ ಸಂಘದ ಮೂಲಕ ನಿಗದಿತ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದು ಸೂಕ್ತ ಎಂದು ಸದಸ್ಯರು ಸಲಹೆ ನೀಡಿದರು. ಸಂಘದ ಜಾಗದಲ್ಲಿ ರೈತ ಸಮುದಾಯ ಭವನ ನಿರ್ಮಿಸಿದರೆ ಸಂಘಕ್ಕೆ ಆದಾಯವೂ ಬರುತ್ತದೆ ಎಂಬ ಸಲಹೆಯನ್ನು ಸದಸ್ಯರು ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಕೃಷ್ಣೇಗೌಡ ಮಾತನಾಡಿ, ಸಂಘದ ಪ್ರಗತಿ ವಿಚಾರದಲ್ಲಿ ಸದಸ್ಯರು ಹಲವಾರು ಸಲಹೆಗಳನ್ನು ನೀಡಿದ್ದು, ಇವುಗಳನ್ನು ಪರಿಶೀಲಿಸಿ ಸಂಘಕ್ಕೆ ಆದಾಯ ಬರುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ಸಂಘದ ನಿರ್ದೇಶಕರಾದ ನಾಗವಾರ ರಂಗಸ್ವಾಮಿ, ಶಿವಲಿಂಗೇಗೌಡ, ರವಿಕುಮಾರ್, ರಂಗನಾಥ್, ಎಂ.ಪಿ.ಚಂದ್ರಶೇಖರ್, ಶಿವಲಿಂಗಯ್ಯ, ಮಂಜುಳಾ, ರಂಗರಾಜು, ಸೋಮಣ್ಣ ಹಾಜರಿದ್ದರು.
ಸಂಘದ ಕಾರ್ಯದರ್ಶಿ ಗಿರಿರಾಜು ವರದಿ ಮಂಡಿಸಿದರು. ಟಿಎಪಿಸಿಎಂಎಸ್ ನೌಕರ ಯೋಗೇಶ್ ಸ್ವಾಗತಿಸಿ, ನಾಗಣ್ಣ ನಿರೂಪಿಸಿದರು.