ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿಷ್ಣುತಾ ಭಾವ ಪ್ರತಿಪಾದಿಸಿದ್ದ ಕಾಯ್ಕಿಣಿ

Last Updated 12 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಕುಮಟಾ: ಗೋಕರ್ಣದಂತಹ ಕ್ಷೇತ್ರದಲ್ಲಿದ್ದರೂ ಗೌರೀಶ ಕಾಯ್ಕಿಣಿ ಚಿಕಿತ್ಸಕ ಬುದ್ಧಿ ಬೆಳೆಸಿಕೊಂಡಿದ್ದರು ಎಂದು  ನಾಡೋಜ  ಚೆನ್ನವೀರ ಕಣವಿ ಹೇಳಿದರು. ಕಮಟಾ ತಾಲ್ಲೂಕಿನ ಗೋಕರ್ಣದ ಗೌರೀಶರ ಮನೆಯಲ್ಲಿ ಸೋಮವಾರ ನಡೆದ ~ಗೌರೀಶ ಕಾಯ್ಕಿಣಿ ಜನ್ಮಶತಾಬ್ದಿ~ ಆರಂಭೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

~ಕವಿ ವಿಷ್ಣು ನಾಯ್ಕ ಅವರು ಗೌರೀಶರ 10 ಸಂಪುಟಗಳಷ್ಟು ಬರವನ್ನು ಪ್ರಕಟಿಸದಿದ್ದರೆ ಕನ್ನಡಿಗರಿಗೆ ಬಹುದೊಡ್ಡ ನಷ್ಟವಾಗುತ್ತಿತ್ತು. ಗೌರೀಶರ ಬರಹ ವೈಚಾರಿಕತೆ ಜೊತೆ ಕಲಾತ್ಮಕವಾಗಿಯೂ ಧ್ವನಿಪೂರ್ಣ. ಸರ್ವಧರ್ಮ ಸಮನ್ವಯತೆಯ ಹಟಕ್ಕಿಂತ ಸಹಿಷ್ಣುತಾ ಭಾವ ಮೇಲು ಎಂಬುದನ್ನು ಗೌರೀಶ ಸದಾ ಪ್ರತಿಪಾದಿಸುತ್ತಿದ್ದರು. ಗೌರೀಶರ ಮನೆಯ ಹಿಂದೆ ಸದಾ ಮೊರೆಯುವ ಸಮುದ್ರದಂತೆ ಅವರ ವಿಚಾರಗಳೂ ನಿತ್ಯ ನೂತನವಾಗಿದ್ದವು~ ಎಂದರು.

ವಿಮರ್ಶಕ ಗಿರಡ್ಡಿ ಗೋವಿಂದರಾಜ, ಸ್ಥಳೀಯ ಪರ್ಣಕುಟಿ ಬಳಗದ ಡಾ. ವಿ.ಆರ್. ಮಲ್ಲನ್, ಕಾಯ್ಕಿಣಿ ಪ್ರತಿಷ್ಠಾನದ ಡಾ.ವಿ.ಎನ್. ಹೆಗಡೆ, ಉತ್ತರ ಕನ್ನಡ ಜಿಲ್ಲಾ ಗೌರೀಶ ಕಾಯ್ಕಿಣಿ ಶತಾಬ್ದಿ ಕ್ರಿಯಾ ಸಮಿತಿ ಅಧ್ಯಕ್ಷ ವಿಷ್ಣು ನಾಯ್ಕ, ಬರಹಗಾರ ವಿ.ಜೆ. ನಾಯಕ, ಜಿ.ಎಂ. ಸಿದ್ಧೇಶ್ವರ ವೇದಿಕೆಯಲ್ಲಿದ್ದರು.

ಸಾಕ್ಷಿಯಾದ ಪತ್ನಿ: `ಪತಿಯ ಶತಮಾನೋತ್ಸವ ಕಾರ್ಯಕ್ರಮವನ್ನು ಸಾಕ್ಷೀಕರಿಸುವಂಥ ಅವಕಾಶ ನಮ್ಮ ಅಮ್ಮ ಶಾಂತಾ ಕಾಯ್ಕಿಣಿ ಅವರಿಗೆ ದೊರೆತಿದ್ದು, ಸದ್ಯ ಕನ್ನಡದ ಯಾವ ಸಾಹಿತಿ ಪತ್ನಿಗೂ ಇಂಥ ಅವಕಾಶ ಸಿಗಲಾರದೇನೋ` ಎಂದು ಗೌರೀಶ ಕಾಯ್ಕಿಣಿ ಅವರ ಪುತ್ರ ಕಥೆಗಾರ, ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಗೋಕರ್ಣದ ತಮ್ಮ  ಮನೆಯ ಮಹಡಿಯ ಮೇಲೆ ನಡೆಯುತ್ತಿದ್ದ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಕೆಳಗೆ ಜಗಲಿಯಲ್ಲಿ ಕೂತು ಶಾಂತಾ ಕಾಯ್ಕಿಣಿ ಆಲಿಸಿದರು. ಡಾ. ಎಂ.ಜಿ.ಹೆಗಡೆ ಸಂಪಾದಿಸಿದ ಗೌರೀಶರ ಬಗ್ಗೆ ಬರೆದ ಬರಹಗಳ ಸಂಗ್ರಹ ~ಕಟಾಂಜನ~ ಕೃತಿಯನ್ನು ಚೆನ್ನವೀರ ಕಣವಿ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT