ಉಜಿರೆ: ಕ್ರಿ.ಶ 1499 ರಲ್ಲಿ ಕಾಲಯುಕ್ತಿ ಸಂವತ್ಸರದ ಕಾರ್ತಿಕ ಶುದ್ಧ ದಶಮಿ, ಬುಧವಾರ ಬರೆದ ಎರಡು ಪ್ರಾಚೀನ ಶಿಲಾಶಾಸನಗಳು ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿಯ ಭೈರೇದೇವರು ಗ್ರಾಮದಲ್ಲಿರುವ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪತ್ತೆಯಾಗಿವೆ ಎಂದು ಖ್ಯಾತ ಶಿಲಾಶಾಸನ ತಜ್ಞ ಹಾಗೂ ಇಲ್ಲಿನ ಎಸ್.ಡಿ.ಎಂ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ವೈ.ಉಮಾನಾಥ ಶೆಣೈ ತಿಳಿಸಿದ್ದಾರೆ.
ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಡಾ. ಶೆಣೈ ಈ ಸಂಬಂಧ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಪ್ರಾಚೀನ ಕನ್ನಡ ಲಿಪಿಯಲ್ಲಿ 31 ಮತ್ತು 29 ಪಂಕ್ತಿಗಳಲ್ಲಿ ಬರೆದ ಎರಡು ಶಾಸನಗಳಲ್ಲಿ ಒಂದು ಅಕ್ಷರವೂ ಹಾಳಾಗಿಲ್ಲ. ಕಾರ್ಕಳದ ಅರಸ ಹಿರಿಯ ಪಾಂಡ್ಯಪ್ಪೊಡೆಯ, ಇಮ್ಮಡಿ ನರಸಿಂಗರಾಯ, ಶ್ರೀಮದ್ದೇವೇಂದ್ರಕೀರ್ತಿ ಮೊದಲಾದವರ ಹೆಸರನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಪಂಚಮಿ ಕಲ್ಲಿನ ಬೆಟ್ಟದ ಮೇಲೆ ಎರಡು ಶಿಲಾ ಮಂಟಪಗಳಿವೆ. ಅಲ್ಲಿ ಜಿನಬಿಂಬದ ರೇಖಾಕೃತಿ, ಮಾನಸ್ತಂಭ, ಮುನಿಗಳ ಪಾದಗಳ ಕುರುಹು ಮತ್ತು ಸಮಾಧಿಯ ಕುರುಹುಗಳು ಕಾಣಸಿಗುತ್ತವೆ. ಹಿಂದೆ ಇಲ್ಲಿಗೆ ಲಲಿತಪುರ ಎಂಬ ಹೆಸರಿತ್ತು ಎಂದು ತಿಳಿದು ಬರುತ್ತದೆ.ಸಹ್ಯಾದ್ರಿಯ ಮಡಿಲಲ್ಲಿ ಶಾಂತಿಧಾಮವಾಗಿ ಕಣ್ಮನ ಸೆಳೆಯುವ ಈ ಕ್ಷೇತ್ರದ ಬಗ್ಗೆ ಅಧ್ಯಯನ, ಸಂಶೋಧನೆ ನಡೆದಲ್ಲಿ ಅನೇಕ ವಿಷಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.