ನಗರದ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯಲ್ಲಿ ನಡೆಯುತ್ತಿದ್ದ `ಕೈಯಾಕಿ ಕೈಯಾಕಿ ಮನಸಿಗೆ ಕೈಯಾಕಿ... ಕಣ್ ಹಾಕಿ ಕಣ್ ಹಾಕಿ ವಯಸ್ಸಿಗೆ ಕಣ್ ಹಾಕಿ..~ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ನಾಯಕಿ ರಾಧಿಕಾ ಪಂಡಿತ್ ಮೆಟ್ರೋ ಜೊತೆ ಮಾತಿಗಿಳಿದರು. `ಸಾಗರ್~ ಚಿತ್ರದ ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಜೊತೆ ರಾಧಿಕಾ ಹೆಜ್ಜೆ ಹಾಕಿದ್ದರು. ಹಿರಿಯ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರ ನೇತೃತ್ವದಲ್ಲಿ ಹಾಡು ಸುಂದರವಾಗಿ ಮೂಡಿಬಂದಿದೆಯಂತೆ.
ಇದೇ ಮೊದಲ ಬಾರಿಗೆ ನಿರ್ಮಾಪಕ ರಾಮು ಅವರ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ ಚಿತ್ರೀಕರಣವನ್ನು ಪೂರೈಸಿ ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಫೆ.22ರ ರಾತ್ರಿ ಸಿಂಗಾಪುರಕ್ಕೆ ತೆರಳುವ ತಯಾರಿಯಲ್ಲಿದ್ದ ಅವರು ಅಲ್ಲಿ ಎರಡು ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸಿ ಫೆ.29ಕ್ಕೆ ಬೆಂಗಳೂರಿಗೆ ಮರಳಿ ಬರಲಿದ್ದಾರೆ.
ಇತ್ತೀಚೆಗೆ `ಮೊದಲೇ ಏಕೆ ಸಿಗಲಿಲ್ಲ ನೀನು ನನಗೆ..~ ಹಾಡಿನ ಚಿತ್ರೀಕರಣ ಸಕಲೇಶಪುರದ ಸುತ್ತಮುತ್ತ ನಡೆಯಿತು. `ಸಾಗರ~ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್, ಛಾಯಾಗ್ರಾಹಕ ಕೃಷ್ಣಕುಮಾರ್, ಸಂಭಾಷಣೆ ಬಿ.ಎ.ಮಧು, ಸಾಹಿತ್ಯ ಕವಿರಾಜ್, ಸಂಗೀತ ಗುರುಕಿರಣ್, ಕಲೆ ಮೋಹನ್ ಬಿ.ಕೆರೆ, ಸಂಕಲನ ಸೌಂದರ್ರಾಜ್, ಸಾಹಸ ಪಳನಿರಾಜ್, ರವಿವರ್ಮ, ಕೆ.ಡಿ. ವೆಂಕಟೇಶ್ ಅವರದ್ದು.
ನಾಯಕ ಪ್ರಜ್ವಲ್ ದೇವರಾಜ್ಗೆ ರಾಧಿಕಾ ಪಂಡಿತ್, ಸಂಜನಾ, ಹರಿಪ್ರಿಯಾ ಸೇರಿದಂತೆ ಮೂವರು ನಾಯಕಿಯರು. ತೆಲುಗಿನ `ಮಗಧೀರ~ ಚಿತ್ರದಲ್ಲಿ ನಟಿಸಿದ್ದ ದೇವ್ಗಿಲ್ ಖಳನ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಉಳಿದಂತೆ ಅವಿನಾಶ್, ಶರತ್ ಲೋಹಿತಾಶ್ವ, ವಿನಯಾ ಪ್ರಕಾಶ್, ಸಂಗೀತಾ ಅಭಿನಯವಿದೆ.