ಲಿಂಗಸುಗೂರ: ಯಾವುದೇ ಒಂದು ಸಾಧನೆಗೆ ಬಡತನ-ಶ್ರೀಮಂತಿಕೆ ಎಂಬುದು ಅಡ್ಡಿಯಾಗದು. ಗುರಿ ತಲುಪಲು ನಿರಂತರ ಸಾಧನೆ ಮೈಗೂಡಿಸಿಕೊಂಡರೆ ಎಂತಹ ಗುರಿಯನ್ನೂ ಸುಲಭವಾಗಿ ಮುಟ್ಟಬಹುದು. ಆ ಎಲ್ಲಾ ಸಾಧನೆಗಳಿಗೆ ಶಿಕ್ಷಣ ಮೆಟ್ಟಿಲಾಗಿ ಕೆಲಸ ಮಾಡಬಲ್ಲದು.
ಕಾರಣ ಪ್ರತಿಯೋರ್ವರು ಶಿಕ್ಷಣವಂತರಾಗುವಂತೆ ಸಹಾಯಕ ಆಯುಕ್ತ ಟಿ. ಯೊಗೇಶ ಕರೆ ನೀಡಿದರು.
ಜ್ಞಾನಗಂಗಾ ಎಜ್ಯುಕೇಷನ್ ಟ್ರಸ್ಟ್ನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು.
ಶಾಲಾ ಕಾಲೇಜುಗಳು ಮಕ್ಕಳ ಭವಿಷ್ಯ ರೂಪಿಸುವ ದೇವಾಲಯಗಳು. ಈ ನಿಟ್ಟಿನಲ್ಲಿ ಸಂಸ್ಥೆ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ ಸುಂದರ ವಾತಾವರಣದಲ್ಲಿ ಶಾಲೆ ನಿರ್ಮಿಸಿ ಶಿಕ್ಷಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ. ಪಾಲಕರು ಕೂಡ ಸಹಕಾರ ನೀಡುವಂತೆ ಸಲಹೆ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಮುರಾರಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರಮೇಶ ಜೋಷಿ ಮಾತನಾಡಿ, ಶೈಕ್ಷಣಿಕವಾಗಿ ಹೈದರಾಬಾದ್ ಕರ್ನಾಟಕ ಸಾಕಷ್ಟು ಹಿಂದುಳಿದಿದೆ. ಈ ಪ್ರದೇಶದಲ್ಲಿ ಉನ್ನತ ಹಾಗೂ ಉತ್ತಮ ಶಿಕ್ಷಣ ಸಂಸ್ಥೆಗಳ ಕೊರತೆಯೆ ಈ ಹಿನ್ನಡೆಗೆ ಕಾರಣವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಲಾ ಬಗೆಯ ಶಾಲಾ ಕಾಲೇಜುಗಳನ್ನು ಹುಟ್ಟು ಹಾಕುವ ಮೂಲಕ ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಂಸ್ಥೆ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎ. ನಂದಿಕೋಲಮಠ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.