ಚಿಕ್ಕನಾಯಕನಹಳ್ಳಿ: ಸಾಮಾಜಿಕ ಪಿಡುಗುಗಳ ನಿವಾರಣೆಗೆ ಮಹಿಳಾ ಶಕ್ತಿ ಹೆಚ್ಚು ಕ್ರಿಯಾಶೀಲವಾಗುತ್ತಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ ಹೇಳಿದರು.
ತಾಲ್ಲೂಕಿನ ಕಂದಿಕೆರೆಯಲ್ಲಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳಲ್ಲಿ ಕೃಷಿ ಜಮೀನು ಮಾರಾಟ ಮಾಡುವ ಗಂಡಸರ ಕೃತ್ಯಕ್ಕೆ ಕಡಿವಾಣ ಹಾಕಲು ಫಹಣಿಯಲ್ಲಿ ಮಹಿಳೆ ಹೆಸರನ್ನು ಸೇರಿಸಲು ಕಂದಾಯ ಒತ್ತಾಯಿಸ ಬೇಕಿದೆ. ಮಹಿಳಾ ಸಂಘಗಳು ತಯಾರಿಸುತ್ತಿರುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಕ್ಕಾಗಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಸ್ತ್ರೀಶಕ್ತಿ ಭವನ ಸ್ಥಾಪಿಸಲಾಗಿದೆ ಎಂದರು.
ನಬಾರ್ಡ್ನ ಸಹಾಯಕ ವ್ಯವಸ್ಥಾಪಕ ಜಿ.ಅನಂತಕೃಷ್ಣನ್ ಕಾವೇರಿ ಕಲ್ಪತರು ಬ್ಯಾಂಕ್ ಸಾಲಸೌಲಭ್ಯ ನೀಡಿಕೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದೆ ಎಂದರು. ಶಾಖಾ ವ್ಯವಸ್ಥಾಪಕ ಆರ್.ಎಂ. ಕುಮಾರಸ್ವಾಮಿ ರೂ. 18 ಲಕ್ಷ ಸಾಲವಿತರಣೆ ಮಾಡಿದರು.
ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಲೋಹಿತಾಬಾಯಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ಜಯಣ್ಣ ಉಪಸ್ಥಿತರಿದ್ದರು. ಕೆ.ಮಾಧವ ಸ್ವಾಗತಿಸಿದರು. ಕೆ.ಜಿ.ಪ್ರಭಾಕರ್ ನಿರೂಪಿಸಿದರು.