ಭಾಲ್ಕಿ: ಸಮಾಜದಲ್ಲಿ ಬಾಳುವ ಎಲ್ಲರೂ ನೆಮ್ಮದಿಯಿಂದ ಬಾಳಬೇಕಾದರೆ ಪರಸ್ಪರ ಸಹಕಾರ ಅಗತ್ಯ ಎಂದು ಡಾ. ಬಸವಲಿಂಗ ಪಟ್ಟದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಂಗಳವಾರ ನಡೆದ `ಯಾತ್ರಿ ನಿವಾಸ'ದ ಅಡಿಗಲ್ಲು ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ವರು ಮಾತನಾಡಿದರು.
ಭಾಲ್ಕಿಗೆ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಮಾಜಿ ಶಾಸಕ ಪ್ರಕಾಶ ಖಂಡ್ರೆಯವರು ಸಾಕಷ್ಟು ಪ್ರಯತ್ನ ಪಟ್ಟು 1 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಅದರಲ್ಲಿ 40 ಲಕ್ಷ ರೂಪಾಯಿ ಬಿಡುಗಡೆ ಆಗಿದೆ. ಈಗ ಶಾಸಕ ಈಶ್ವರ ಖಂಡ್ರೆ ಅವರು ಇನ್ನುಳಿದ 60 ಲಕ್ಷ ಅನುದಾನ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಭಾಲ್ಕಿಯ ಹಿರೇಮಠ ಸಂಸ್ಥಾನದ ಧರ್ಮ ಪ್ರಸಾರ, ಶಿಕ್ಷಣ, ಅನಾಥರಿಗೆ ಆಶ್ರಯ ಮುಂತಾದ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ ಎಂದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ಸಾಮಾಜಿಕ ಪರಿವರ್ತನೆಗಾಗಿ ಭಾಲ್ಕಿಶ್ರೀಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಸಾಕಷ್ಟು ಕಾರ್ಯ ಮಾಡುತ್ತಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ.ಜಿ.ಬಿ ವಿಸಾಜಿ, ಚಂದ್ರಕಾಂತ ಬಿರಾದಾರ, ಶಂಭುಲಿಂಗ ಕಾಮಣ್ಣ, ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಪತ್ರಕರ್ತ ಅಶೋಕ ರಾಜೋಳೆ, ಎಂಜಿನಿಯರ್ ಅನಿಲಕುಮಾರ, ವಿಶ್ವನಾಥಪ್ಪ ಬಿರಾದಾರ, ಸಿದ್ಧಯ್ಯಾ ಕಾವಡಿಮಠ, ಸಿಪಿಐ ಪ್ರಸಾದ ಗೋಖಲೆ, ಮಹೇಶ್ವರಿ ಸ್ವಾಮಿ ಇದ್ದರು.