ಚಿಕ್ಕಮಗಳೂರು: `ದೇಶದ ಇಂದಿನ ವ್ಯವಸ್ಥೆ ಪುಡಿ ಮಾಡಿ, ಹೋರಾಟವನ್ನು ಕ್ರಾಂತಿಕಾರಿ ಪಥದಲ್ಲಿ ಮುನ್ನೆಡೆಸಿ, ದೇಶದ ವ್ಯವಸ್ಥೆ ಬದಲಿಸಬೇಕು~ ಎಂದು ಸಿಪಿಐ(ಎಂ.ಎಲ್.) ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್.ರಾಮಚಂದ್ರನ್ ಮನವಿ ಮಾಡಿದರು.
ನಗರದ ಕೆಇಬಿ ಹಿಂಭಾಗದ ಪಾಲಿ ಟೆಕ್ನಿಕ್ ಮೈದಾನದಲ್ಲಿ ಸೋಮ ವಾರ ನಡೆದ ಸಿಪಿಐ(ಎಂ.ಎಲ್.) ಏಳನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿ ಸ್ಥಿತಿ ಬದಲಾವಣೆಯಾಗುತ್ತಿದೆ. ಸಾಮ್ರಾ ಜ್ಯಶಾಹಿ ವಾದಕ್ಕೆ ಸಮಾಜವಾದವೇ ಪರ್ಯಾಯ. ಕೇಂದ್ರ ಮತ್ತು ರಾಜ್ಯದ ಸರ್ಕಾರದ ಆಡಳಿತ ವೈಖರಿ ವಿರುದ್ಧ ಕಿಡಿಕಾರಿದರು. ಇಷ್ಟು ವರ್ಷಗಳ ಕಾಲ ದೇಶ ಮತ್ತು ರಾಜ್ಯ ಆಳಿದ ಆಳುವ ವರ್ಗದ ಪಕ್ಷಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಟೀಕಿಸಿದರು.
ಬ್ರಿಟೀಷರು ಹುಟ್ಟು ಹಾಕಿದ ಕಾಂಗ್ರೆಸ್ ಪಕ್ಷ ರೈತರು, ಕಾರ್ಮಿಕರಿಗೆ ಮೋಸ ಮಾಡುತ್ತಿದೆ. ಕೇಂದ್ರದ ಯುಪಿಎ ಸರ್ಕಾರ ದೇಶದ ನೈಸರ್ಗಿಕ ಸಂಪತ್ತನ್ನು ಸಾಮ್ರಾಜ್ಯಶಾಹಿಗಳ ಪಾದ ಕ್ಕಿಡುತ್ತಿವೆ. ಕಾಂಗ್ರೆಸ್ ಸೇರಿದಂತೆ ಜನ ವಿರೋಧಿ ಪಕ್ಷಗಳ ವಿರುದ್ಧ ಸಮರ ಸಾರಬೇಕಾಗಿದೆ. ಈ ಪಕ್ಷದ ನೀತಿಯನ್ನೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮುಂದು ವರಿಸಿದ್ದು, ಜನರ ಶೋಷಣೆ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮುಂದಿನ ಪರ್ಯಾಯ ನಿರ್ಮಾಣ ನಮ್ಮ ಮುಂದಿನ ಗುರಿ. ಸಾಮ್ರಾಜ್ಯವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆ ತೊಲಗಿದಾಗ ಮಾತ್ರ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೆಂಬ ಸತ್ಯವನ್ನು ಪಕ್ಷದ ಕಾರ್ಯಕರ್ತರು ಅರಿಯಬೇಕು. ನವ ಉದಾರೀಕರಣದ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆನೀಡಿದರು.
ಸಿಪಿಐ ಮತ್ತು ಸಿಪಿಎಂ ಪಕ್ಷಗಳಿಗೆ ದೇಶದ ಇಂದಿನ ವ್ಯವಸ್ಥೆಯನ್ನು ಕಿತ್ತೊಗೆಯಲು ಸಾಧ್ಯವಾಗದೆ. ಕಮ್ಯು ನಿಸ್ಟ್ ಚಳವಳಿಗೆ ದ್ರೋಹ ಬಗೆಯುತ್ತಿವೆ. ಆಳುವ ವ್ಯವಸ್ಥೆಗೆ ಸಹಕರಿಸುತ್ತಿವೆ ಎಂದು ಟೀಕಿಸಿದರು.
ನಕ್ಸಲೀಯರು ತುಳಿದಿರುವ ಅರಾಜ ಕತಾವಾದದಿಂದಲೂ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲ. ಕ್ರಾಂತಿಯನ್ನು ಬಯಲಿನಲ್ಲೆ ಮಾಡಬೇಕೇ ಹೊರತು ಕಾಡಿನಲ್ಲಲ್ಲ. ದೇಶದ ಇಂದಿನ ಪರಿಸ್ಥಿತಿಗೆ ತಕ್ಕಂತೆ ಹೋರಾಟ ರೂಪಿಸಿ, ಈ ವ್ಯವಸ್ಥೆ ಬದಲಿಸಲು ಪಕ್ಷದ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸುಲಿಗೆ ವ್ಯವಸ್ಥೆ ವಿರುದ್ಧ ಹೋರಾಟದ ಕಿಚ್ಚು ಹೆಚ್ಚಾ ಗಬೇಕೆಂದರು.
ಕೇಂದ್ರ ಕಾರ್ಯನಿರ್ವಾಹಕ ಸಮಿತಿ ಆರ್.ಮಾನಸಯ್ಯ, ಜಿಲ್ಲೆಯಲ್ಲಿ ಕ್ರಾಂತಿಯ ಬೀಜ ಮೊಳಕೆಯೊ ಡೆಯು ತ್ತಿದೆ. ಒತ್ತುವರಿ ತೆರವಿಗೆ ಜಿಲ್ಲಾಡಳಿತ ಮುಂದಾದಾಕ್ಷಣ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಭೂ ಮಾಲೀಕರ ಪರ ವಕಾಲತ್ತು ವಹಿಸುತ್ತಿವೆ. ಇದನ್ನು ಗಮನಿಸಿದೆ ಈ ಎ್ಲ್ಲಲ ಪಕ್ಷಗಳು ಒಂದೇ ಗಿಡದ ಹಣ್ಣುಗಳಿದ್ದಂತೆ ಎಂದು ಟೀಕಿಸಿದರು.
ಕಾರ್ಮಿಕರ, ದುಡಿಯುವ ವರ್ಗದ, ಶೋಷಿತರ ಪರವಾಗಿ ಹೋರಾಟ ನಡೆಸುತ್ತಿರುವ ಸಿಪಿಐ(ಎಂ.ಎಲ್.) ಮಲೆನಾಡು ಭೂಮಿಗೆ ಭೂಮಿತಿ ಕಾಯ್ದೆ ಅಳವಡಿಸಬೇಕು. ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಂಡು ಭೂರಹಿತರಿಗೆ ಹಂಚುವಂತೆ ಒತ್ತಾ ಯಿಸಿದೆ. ಪಕ್ಷದ ಮುಂದಿನ ಹೋರಾಟಕ್ಕೆ ಕಾರ್ಯಕರ್ತರು ಕೈಜೋಡಿಸಬೇಕು. ನೂತನ ಪ್ರಜಾತಾಂತ್ರಿಕ ವ್ಯವಸ್ಥೆ ನಿರ್ಮಾಣಕ್ಕೆ ಸಮಸ್ತ ದುಡಿಯುವ ವರ್ಗ ಮುಂದಾಗಬೇಕೆಂದು ಮನವಿ ಮಾಡಿದರು.
ಸರ್ಕಾರಕ್ಕೆ ಸರಿಯಾದ ಒತ್ತುವರಿ ಮಾಹಿತಿ ಇಲ್ಲ. ಸರ್ಕಾರಿ ಭೂಮಿ ಕಬಳಿಸಿರುವ ಕಡತಗಳು ನಾಪತ್ತೆಯಾಗುತ್ತಿವೆ. ಒಂದು ವಾರ ಕಾಲಾವಕಾಶ ನೀಡಿದರೆ, ಇಡೀ ರಾಜ್ಯದ ಭೂ ಕಬಳಿಕೆ ಮಾಹಿತಿ ಬಯಲು ಮಾಡುತ್ತೇವೆ. ಧೈರ್ಯವಿದ್ದರೆ ಸರ್ಕಾರ ಆ ಭೂಮಿ ವಶಕ್ಕೆ ಪಡೆದು, ಭೂರಹಿತರಿಗೆ ನೀಡಲು ಮುಂದಾಗಲಿ ಎಂದು ಸವಾಲು ಹಾಕಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಮುಖಂಡರಾದ ಬಸವಲಿಂಗಪ್ಪ, ಡಿ.ಎಚ್.ಪೂಜಾರ್, ಚಿನ್ನಪ್ಪ ಕೊಟ್ರಕ್ಕಿ, ನಿರ್ವಾಣಪ್ಪ, ಜಿಲ್ಲಾ ಕಾರ್ಯದರ್ಶಿ ಐ.ಎಂ. ಪೂರ್ಣೇಶ್, ವಿದ್ಯಾರ್ಥಿ ಸಂಘಟನೆ, ಯುವಜನ ಸಂಘಟನೆ, ಕಾರ್ಮಿಕ ಸಂಘಟನೆ, ಜನ ಸಾಂಸ್ಕೃತಿಕ ಸಂಘಟನೆ ಮತ್ತು ಮಹಿಳಾ ಸಂಘಟನೆ ಮುಖಂಡರಾದ ಗಂಗಾಧರ, ಸಂದೀಪ, ವನಜಾಕ್ಷಿ, ರುಕ್ಷ್ಮಿಣಿ, ಉದ್ದಪ್ಪ, ಮಂಜುನಾಥ, ಹುಚ್ಚಾರೆಡ್ಡಿ, ವೆಂಕಟೇಶ್, ವಿಜಯ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.