ಚನ್ನಗಿರಿ: ಸಾಹಿತ್ಯಕ್ಕೆ ಮನುಷ್ಯನ ಮೂಲ ಸಂತೋಷವನ್ನು ವೃದ್ಧಿಪಡಿಸುವಂತಹ ಗುಣ ಇರುತ್ತದೆ. ಸಾಹಿತ್ಯ ರಚಿಸುವವರಿಗೆ ಆಯಾ ಭಾಷೆಯ ಮೇಲಿನ ಹಿಡಿತ ಅಗತ್ಯ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ತಾಳ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಲ್ಲಮ್ಮ, ಶಿವಲಿಂಗಪ್ಪ ವಡ್ನಾಳ್ ಸ್ಮಾರಕ ದತ್ತಿ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಅಂತರಕಾಲೇಜು ಪದವಿಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದಲ್ಲಿ ಅದ್ಭುತವಾದ ಕಾವ್ಯಗಳಿವೆ. ಸಾಹಿತ್ಯ ಬರೀ ಸಂತೋಷ ಮಾತ್ರವಲ್ಲ; ಬದುಕಿನ ವಾಸ್ತವ ನೆಲೆಗಟ್ಟು ಸಾಹಿತ್ಯದ ಮೂಲಕ ಗೊತ್ತಾಗುತ್ತದೆ. ಸಾಹಿತ್ಯದಲ್ಲಿ ಮನುಷ್ಯನಲ್ಲಿ ವಿಚಾರ ಮೂಡಿಸುವ ಅಂಶಗಳು ಇರಬೇಕು.
ಕವಿತೆ ಬರೆಯುವಾಗ ಸಾಮಾಜಿಕ ಎಚ್ಚರಿಕೆ ಅಗತ್ಯ. ಭಾಷೆಗೆ ನೂರಾರು ಮುಖಗಳಿವೆ. ಸಾಹಿತ್ಯದಲ್ಲಿ ಭಾಷೆಯ ಸ್ಪಷ್ಟ ತಿಳಿವಳಿಕೆ ಇರುವುದು ಅವಶ್ಯ. ವಿದ್ಯಾರ್ಥಿ ದೆಸೆಯಲ್ಲಿ ಕವಿತೆಗಳನ್ನು ರಚಿಸುವ ಗುಣ ಬೆಳೆಸಿಕೊಳ್ಳುವುದು ಉತ್ತಮ ಎಂದರು.
ನಲ್ಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಬಿ.ಎಸ್. ನಾಗೇಶ್, ರಂಗಕಲಾ ಶಿಕ್ಷಕ ಕೆ. ವೆಂಕಟೇಶ್ವರ, ಆಂಗ್ಲ ಭಾಷಾ ಉಪನ್ಯಾಸಕ ಪ್ರೊ.ಎ. ಮಧ್ವಾಚಾರ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಓ.ಎಸ್. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಲತಾಮಣಿ ಪ್ರಾರ್ಥಿಸಿದರು. ಉಪನ್ಯಾಸಕ ಪ್ರವೀಣ್ ಸ್ವಾಗತಿಸಿದರು.