ಕೊಲಂಬೊ (ಪಿಟಿಐ): ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಶ್ರೀಲಂಕಾದ ಜಾಫ್ನಾ ಭೇಟಿಯನ್ನು ಪ್ರಮುಖ ವಿರೋಧ ಪಕ್ಷವಾದ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ವಿರೋಧಿಸಿದೆ.
ಈ ಕುರಿತು ಸಂಸತ್ನಲ್ಲಿ ದನಿಯೆತ್ತಿದ ಯುಎನ್ಪಿ ಹಿರಿಯ ನಾಯಕ ಜಾನ್ ಅಮರತುಂಗ, ‘ಕಳೆದ ತಿಂಗಳು ರಾಜಧಾನಿಯಲ್ಲಿ ನಡೆದ ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಶೃಂಗಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ ಸಿಂಗ್ ಅವರು, ಜಾಫ್ನಾಕ್ಕೆ ಭೇಟಿ ನೀಡುತ್ತಿರುವುದು ಸ್ವೀಕಾರಾರ್ಹವಲ್ಲ’ ಎಂದರು.
‘ದೇಶದ ಅಧ್ಯಕ್ಷರಾದ ಮಹಿಂದಾ ರಾಜಪಕ್ಸೆ ಅವರ ಆಹ್ವಾನ ಇಲ್ಲದೆ, ಭಾರತದ ಪ್ರಧಾನಿ ಹೇಗೆ ದೇಶಕ್ಕೆ ಭೇಟಿ ನೀಡುತ್ತಾರೆ?’ ಎಂದು ಅವರು ಪ್ರಶ್ನಿಸಿದರು.
‘ಎಲ್ಟಿಟಿಇ’ಯನ್ನು ಬಗ್ಗುಬಡಿದ ಪ್ರದೇಶವಾದ ಜಾಫ್ನಾಗೆ ಸಿಂಗ್ ಅವರು ಭೇಟಿ ನೀಡುವುದರಿಂದ ಅಲ್ಲಿ ಪ್ರತ್ಯೇಕ ದೇಶದ ಕೂಗು ಕೇಳಿ
ಬರುವ ಆತಂಕವಿದೆ’ ಎಂದು ಅಮರತುಂಗ ಸಂಸತ್ಗೆ ತಿಳಿಸಿದರು. ತಮಿಳರ ಪ್ರಾಬಲ್ಯ ಹೆಚ್ಚಾಗಿರುವ ಜಾಫ್ನಾಗೆ ಭೇಟಿ ನೀಡುವಂತೆ ಅಲ್ಲಿನ ನೂತನ ಮುಖ್ಯಮಂತ್ರಿ ಸಿ.ವಿ. ವಿಘ್ನೇಶ್ವರನ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಇತ್ತೀಚೆಗೆ ಆಹ್ವಾನ ನೀಡಿದ್ದರು.