ರಾಮನಗರ: `ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಆಣೆ, ಪ್ರಮಾಣ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಪಲಾಯನ ಮಾಡುವ ಸಾಧ್ಯತೆ ಇದೆ~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.
ರಾಮನಗರದ ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಬಸವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ನೂತನ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಅದಾಗ್ಯೂ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ~ ಎಂದು ಅವರು ಪುನರುಚ್ಚರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, `ದೇವರ ಮೇಲೆ ಆಣೆ, ಪ್ರಮಾಣಗಳನ್ನು ಮಾಡುವುದು ಸಂವಿಧಾನದ ಚೌಕಟ್ಟಿನಲ್ಲಿ ಬಾಲಿಷವಾಗಿ ಕಾಣುತ್ತದೆ. ಆದರೂ ಈ ಸವಾಲನ್ನು ಸ್ವೀಕರಿಸಿದ್ದೇನೆ. ಕಳೆದ 14ರಂದು ನೀಡಿದ ಹೇಳಿಕೆಗೆ ಬದ್ಧನಾಗಿರುವೆ.
ಮನಸಾಕ್ಷಿಗೆ ವಿರುದ್ಧವಾಗಿ ನಾನು ಮಾತನಾಡಿಲ್ಲ. ಹಾಗಾಗಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಮನಗರದ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು, ರಾಮನಗರದ ಮೂಲಕವೇ ಧರ್ಮಸ್ಥಳಕ್ಕೆ ಪ್ರವಾಸ ಬೆಳೆಸುತ್ತೇನೆ~ ಎಂದು ಹೇಳಿದರು.
`ನಾನೊಬ್ಬನೇ ಧರ್ಮಸ್ಥಳಕ್ಕೆ ಹೋಗುತ್ತೇನೆ. ನನ್ನ ಕುಟುಂಬವನ್ನು ಕರೆದುಕೊಂಡು ಹೋಗುವುದಿಲ್ಲ. ಈ ವಿಷಯದಲ್ಲಿ ಪ್ರಮುಖವಾಗಿ ಇರುವುದು ಮೂರು ಜನ ಮಾತ್ರ. ಮುಖ್ಯಮಂತ್ರಿ, ನಾನು ಮತ್ತು ವಿಧಾನ ಪರಿಷತ್ತಿನ ಸದಸ್ಯ ಲೆಹರ್ ಸಿಂಗ್. ಧರ್ಮಸ್ಥಳಕ್ಕೆ ಹೋಗಿ ಆಣೆ, ಪ್ರಮಾಣ ಮಾಡಬೇಕಿರುವುದು ಮೂವರೇ. ಬೇಕಿದ್ದರೆ ಮುಖ್ಯಮಂತ್ರಿ ಕುಟುಂಬ ಸಮೇತ ಬರಲಿ~ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.