ಹುಬ್ಬಳ್ಳಿ: `ವಾರ್ತಾ ಇಲಾಖೆಯ ಮೂಲಕ ವೈಯಕ್ತಿಕ ಜಾಹೀರಾತು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 157ರ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು~ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ರಾಜ್ಯಪಾಲರನ್ನು ಒತ್ತಾಯಿಸಿದರು.
`ಅವ್ಯವಹಾರಗಳಿಗೆ ಸಂಬಂಧಿಸಿ ತಮ್ಮ ಮೇಲಿನ ಆರೋಪಗಳ ಕುರಿತು ಪ್ರಮಾಣ ಮಾಡಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿ ಮುಖ್ಯಮಂತ್ರಿಗಳು ಪತ್ರಿಕೆಗಳಲ್ಲಿ ಈಚೆಗೆ ಜಾಹೀರಾತು ನೀಡಿದ್ದರು. ಇದು ಇದಕ್ಕಾಗಿ ವಾರ್ತಾ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಇದು ಸಹ್ಯವಲ್ಲ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
`ಸದಾ ಲಿಂಗಾಯಿತ ಮಠಗಳ ಬಗ್ಗೆ ಮಾತನಾಡುವ ಯಡಿಯೂರಪ್ಪ ಅವರು ಆಣೆ ಮಾಡಲು ಮಾತ್ರ ಧರ್ಮಸ್ಥಳವನ್ನು ಆಯ್ಕೆ ಮಾಡಿಕೊಂಡಿರುವುದರ ಹಿಂದಿನ ರಹಸ್ಯವೇನು ಎಂದು ಪ್ರಶ್ನಿಸಿದ ರಾಯರೆಡ್ಡಿ, ಯಡಿಯೂರಪ್ಪ ಅವರು ಲಿಂಗಾಯಿತ ಮಠಗಳ ಮೇಲಿನ ವಿಶ್ವಾಸ ಕಳೆದುಕೊಂಡರೇ ಎಂದು ಕೇಳಿದರು.
`ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಇಬ್ಬರೂ ಭ್ರಷ್ಟರು. ಹೀಗಾಗಿ ಅವರಿಬ್ಬರಿಗೂ ಧರ್ಮಸ್ಥಳದಲ್ಲಿ ಆಣೆ ಮಾಡಲು ಅವಕಾಶ ನೀಡಬಾರದು~ ಎಂದು ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಕೋರಿದರು.