ಬೆಳಗಾವಿ: `ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು~ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಕೃತ್ಯ ಎಸಗಿದ್ದು ನಮ್ಮ ಸಂಘಟನೆಯವರಲ್ಲ~ ಎಂದರು.
ಪಾಕ್ ಧ್ವಜಾರೋಹಣ ಮಾಡಿದವರು ಶ್ರೀರಾಮ ಸೇನೆಯವರು ಎಂದಿರುವ ವಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದಕ್ಕೆ ಸಂಬಂದಿಸಿದ ದಾಖಲೆಗಳನ್ನು ಬಹಿರಂಗ ಪಡಿಸಬೇಕು. ಯಾವುದೇ ದಾಖಲೆಗಳನ್ನು ಎಸ್ಪಿ ಹೊಂದಿರದಿದ್ದರೆ ಶ್ರೀರಾಮ ಸೇನೆಯ ಹೆಸರು ಹೇಳಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು~ ಎಂದು ಅವರು ಆಗ್ರಹಿಸಿದರು.
`ಆರೋಪಿ ರಾಕೇಶ ಮಠ ಶ್ರೀರಾಮಸೇನೆಯ ವಿದ್ಯಾರ್ಥಿ ಘಟಕ ಅಧ್ಯಕ್ಷ ಎಂದು ಹೇಳಲಾಗಿದೆ. ಆದರೆ ಸೇನೆಯಲ್ಲಿ ವಿದ್ಯಾರ್ಥಿ ಘಟಕವೇ ಇಲ್ಲ. ಯಾವುದೇ ಘಟಕದ ಅಧ್ಯಕ್ಷರಿದ್ದರೆ ಅವರಿಗೆ ನೇಮಕಾತಿ ಪತ್ರ ಹಾಗೂ ಸದಸ್ಯರಿಗೆ ಸದಸ್ಯತ್ವ ರಸೀದಿ ನೀಡಲಾಗುತ್ತದೆ. ಆ ದಾಖಲೆಗಳನ್ನು ಅಧಿಕಾರಿಗಳು ಬಹಿರಂಗ ಪಡಿಸಬೇಕು~ ಎಂದು ಒತ್ತಾಯಿಸಿದರು.
`ಆ ವಿದ್ಯಾರ್ಥಿಗಳು ಹಿಂದೂ ಜಾಗರಣ ವೇದಿಕೆ, ಆರ್ಎಸ್ಎಸ್, ವಿಎಚ್ಪಿ, ಎಬಿವಿಪಿಗಳಲ್ಲಿ ಕೆಲಸ ಮಾಡಿದ್ದಾರೆ. ಈ ಬಗೆಗೆ ನಮ್ಮಲ್ಲಿ ದಾಖಲೆಗಳಿವೆ. ಆ ಎಲ್ಲ ಸಂಘಟನೆಗಳ ಹೆಸರು ಬಿಟ್ಟು ನಮ್ಮನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಅದನ್ನು ಶೀಘ್ರದಲ್ಲಿಯೇ ಬಹಿರಂಗ ಪಡಿಸಲಾಗುವುದು~ ಎಂದು ಅವರು ಹೇಳಿದರು.