ಚೆನ್ನೈ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಮ್ಮ ಪುತ್ರಿ ಕನಿಮೊಳಿ ವಿರುದ್ಧ ಸಿದ್ಧಪಡಿಸಿರುವ ತಪ್ಪು ವರದಿಗಳನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಿದೆ ಎಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಆರೋಪಿಸಿದ್ದಾರೆ.
`ಕನಿಮೊಳಿ ವಿರುದ್ಧದ ಆರೋಪಗಳು ಪತ್ರಿಕೆಗಳಲ್ಲಿ ಪ್ರಕಟವಾದ ತಪ್ಪು ವರದಿಗಳನ್ನು ಆಧರಿಸಿವೆ. ಸಿಬಿಐ ಈ ವರದಿಗಳನ್ನೇ ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ. ತಿಹಾರ್ ಜೈಲಿನಲ್ಲಿರುವ ಕನಿಮೊಳಿ ಬೊಕ್ಕೆಗಳಿಂದ ನರಳುತ್ತಿದ್ದು, ಅವು ಅವರ ಮೈತುಂಬಾ ಆವರಿಸುತ್ತಿವೆ.
ಅಲ್ಲಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಜೈಲಿನಲ್ಲಿರುವ ಮಾಜಿ ಸಚಿವ ಎ. ರಾಜಾ ಮತ್ತು ಕಲೈಞ್ಞರ್ ಟಿವಿಯ ಶರತ್ ಕುಮಾರ್ ಸಹ ಸಾಕಷ್ಟು ಕೃಶರಾಗಿದ್ದಾರೆ~ ಎಂದೂ ಆರೋಪಿಸಿದರು. ಇದರಿಂದ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಗೆ ಯಾವುದೇ ಸಮಸ್ಯೆಯಿಲ್ಲ ಎಂದೂ ಸ್ಪಷ್ಟಪಡಿಸಿದರು.