ಬೆಂಗಳೂರು: ರಾಜಧಾನಿಯನ್ನು ಸೀಮೆ ಎಣ್ಣೆ ಮುಕ್ತ ನಗರವನ್ನಾಗಿ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ತಿಳಿಸಿದರು.
ರಾಜ್ಯದಲ್ಲಿ ಸಿಎನ್ಜಿ ಪೈಪ್ಲೈನ್ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಗೃಹ ಕಚೇರಿ `ಕೃಷ್ಣಾ'ದಲ್ಲಿ ಶನಿವಾರ ನಡೆದ ಸಭೆ ನಂತರ ಅವರು ಈ ವಿಷಯ ತಿಳಿಸಿದರು.
ಈಗಾಗಲೇ ಮುಂಬೈ ನಗರ ಸೀಮೆ ಎಣ್ಣೆ ಮುಕ್ತವಾಗಿದೆ. ಕೇಂದ್ರ ಸರ್ಕಾರ ಸಿಎನ್ಜಿ ಅನಿಲ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಮುಂದಿನ ಆರು ತಿಂಗಳ ಒಳಗೆ ಬೆಂಗಳೂರು ನಗರದಲ್ಲೂ ಗೃಹಬಳಕೆಗೆ ಸಿಎನ್ಜಿ ಅನಿಲ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ದೇಶದ 36 ನಗರಗಳಲ್ಲಿ ಸಿಎನ್ಜಿ ಅನಿಲ ದೊರೆಯುತ್ತಿದೆ. ಹುಬ್ಬಳ್ಳಿ-ಧಾರವಾಡ ಮೂಲಕವೂ ಪೈಪ್ಲೈನ್ ಹಾದು ಹೋಗಿದ್ದು, ಆ ನಗರದ ಒಳಗೆ ಇನ್ನೆರಡು ತಿಂಗಳಲ್ಲಿ ಪೈಪ್ಲೈನ್ ಅಳವಡಿಸಲಾಗುವುದು ಎಂದರು.