ನವದೆಹಲಿ (ಐಎಎನ್ಎಸ್): ಕಳಂಕಿತ ಜನಪ್ರತಿ ನಿಧಿಗಳನ್ನು ಸುಗ್ರೀವಾಜ್ಞೆ ಮೂಲಕ ರಕ್ಷಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಭಾರಿ ಟೀಕೆಗೆ ಒಳಗಾಗಿದೆ. ಎಡ ಪಕ್ಷಗಳು ಹಾಗೂ ಬಿಜೆಪಿ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿವೆ.
ಮೋಸಗಾರರು, ವಂಚಕರು ಮತ್ತು ಕೊಲೆಗಡಕರನ್ನು ಸಂಸದರು ಮತ್ತು ಶಾಸಕರ ಸ್ಥಾನದಲ್ಲಿ ನೋಡುವ ಭಾಗ್ಯ ಈ ಸುಗ್ರೀವಾಜ್ಞೆ ಒದಗಿಸಿ ಕೊಡಲಿದೆ ಎಂದು ಬಿಜೆಪಿ ಲೇವಡಿ ಮಾಡಿದೆ. ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕಬಾರದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಟೀಕೆ ಮಾಡುವುದೇ ವಿರೋಧ ಪಕ್ಷದ ಕೆಲಸ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ ತಿರುಗೇಟು ನೀಡಿದ್ದಾರೆ.