ಬೆಂಗಳೂರು: ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯು ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರದ ಸಹಯೋಗದಲ್ಲಿ ರಾಜ್ಯ ಮಟ್ಟದ ಯಕ್ಷರಂಗ ಕಾರ್ಯಾಗಾರ ಹಾಗೂ ಯಕ್ಷರಂಗೋತ್ಸವ ಕಾರ್ಯಕ್ರಮಗಳನ್ನು ಮಾರ್ಚ್ 31 ಮತ್ತು ಏಪ್ರಿಲ್ 1ರಂದು ಆಯೋಜಿಸಲಿದೆ.
ಈ ಕಾರ್ಯಕ್ರಮ ಯಕ್ಷಗಾನ ಮತ್ತು ನಾಟಕ ಪ್ರಕಾರವನ್ನು ತೌಲನಿಕವಾಗಿ ಅಭ್ಯಾಸ ಮಾಡುವ, ಇವೆರಡರ ರಂಗ ಸಾಧ್ಯತೆಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡುವ ನೆಲೆಯಲ್ಲಿ ಸುಳ್ಯದ ರಂಗಮನೆಯಲ್ಲಿ ನಡೆಯಲಿದೆ.
ಯಕ್ಷಗಾನ ಮತ್ತು ನಾಟಕದ ತಂತ್ರ ಹಾಗೂ ವಿನ್ಯಾಸ, ಅಭಿನಯ, ಮಾತುಗಾರಿಕೆ, ವೇಷಭೂಷಣ, ಬಣ್ಣಗಾರಿಕೆ, ಕೃತಿ ಮತ್ತು ಪ್ರಯೋಗ, ಹಿಮ್ಮೇಳ ಮತ್ತು ರಂಗಸಂಗೀತ ವಿಷಯಗಳ ಬಗ್ಗೆ ಎರಡೂ ಕ್ಷೇತ್ರಗಳ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಆಸಕ್ತ 50 ಮಂದಿಗೆ ಮಾತ್ರ ಅವಕಾಶವಿದ್ದು, ಡಾ. ಸುಂದರ ಕೇನಾಜೆ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸುಳ್ಯ, ದಕ್ಷಿಣ ಕನ್ನಡ, ಈ ವಿಳಾಸಕ್ಕೆ ಮಾರ್ಚ್ 8ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಕಾರ್ಯಾಗಾರದ ನಿರ್ದೇಶಕ ಜೀವನ್ರಾಂ ಸುಳ್ಯ (94482 15946) ಅವರನ್ನು ಸಂಪರ್ಕಿಸಬಹುದು.