ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳನ್ನೇ ಸತ್ಯ ಮಾಡುವ ಸರ್ಕಾರ: ಎಸ್ಸೆಸೆಂ

Last Updated 16 ಜೂನ್ 2011, 9:55 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರ ಸುಳ್ಳುಗಳನ್ನೇ ಪದೇಪದೇ ಹೇಳುತ್ತಾ ನಿಜವೆಂದು ಬಿಂಬಿಸಿ ಜನರನ್ನು ವಂಚಿಸುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದರು.
ವಿನೋಬನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಕಾಂಗ್ರೆಸ್ ನಡಿಗೆ-ಜನರ ಬಳಿಗೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಜನರಿಗೆ ಮೂಲಸೌಕರ್ಯ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನೆ ಇಲ್ಲದೇ ಬಡವರು ನಿರ್ಗತಿಕರಾಗಿದ್ದರೂ, ಆಶ್ರಯ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ದಾವಣಗೆರೆ ನಗರದಲ್ಲಿ 14 ಸಾವಿರ ಆಶ್ರಯ ಮನೆ ನಿರ್ಮಿಸುವ ಮೂಲಕ ವಸತಿ ಕ್ರಾಂತಿ ಮಾಡಲಾಗಿತ್ತು. ಆದರೆ, ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸೋತಿದೆ ಎಂದು ದೂರಿದರು.

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದ ಬಹುತೇಕ ಚುನಾವಣೆಗಳಲ್ಲಿ ಜಯಗಳಿಸಿದೆ. ಅದರಿಂದ ಜನರ ಒಲವು ತಮ್ಮ ಕಡೆಗಿದೆ  ಎಂದು ಬೀಗುತ್ತಿದೆ. ಆಡಳಿತಯಂತ್ರ ದುರುಪಯೋಗ ಪಡಿಸಿಕೊಂಡು, ಹಣ ಚೆಲ್ಲಿ ಚುನಾವಣೆ ಗೆಲ್ಲುತ್ತಿದೆ. ವಾಸ್ತವದಲ್ಲಿ ಜನರು ಸರ್ಕಾರದ ಧೋರಣೆಗಳಿಂದ ಬೇಸತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಬೂತ್‌ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ಉದ್ದೇಶ ಹೊಂದಿದೆ. ಜನರ ಸಮಸ್ಯೆಗಳನ್ನು ನಾಯಕರು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು. ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನ ಜಾಗೃತಿ ಮೂಡಿಸುವುದು. ಮತದಾರರ ಪಟ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರ ಹೆಸರು ತೆಗೆದುಹಾಕುವ ಕುತಂತ್ರ ತಡೆಯುವುದು `ನಡಿಗೆ~ಯ ಉದ್ದೇಶ ಎಂದು ವಿವರಿಸಿದರು.

ಕೆಪಿಸಿಸಿ ಸದಸ್ಯ ಅಸಗೋಡು ಜಯಸಿಂಹ ಮಾತನಾಡಿ, ಸಾಮಾಜಿಕ ನ್ಯಾಯ ದೊರೆಕಿಸಲು ಕಾಂಗ್ರೆಸ್‌ಗೆ ಅಧಿಕಾರ ಅನಿವಾರ್ಯ. ಅದು ಮತ್ತೆ ದೊರೆಯಲು ಸಂಘಟನೆ ಗಟ್ಟಿಗೊಳಿಸುವುದು ಅಗತ್ಯ. ಎಲ್ಲ ನಾಯಕರು, ಕಾರ್ಯಕರ್ತರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಕೆ. ಮಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್, ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎಸ್. ಜಗದೀಶ್, ಸದಸ್ಯ ಶಿವನಳ್ಳಿ ರಮೇಶ್, ರೇಖಾ ನಾಗರಾಜ್, ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಅಯೂಬ್ ಪೈಲ್ವಾನ್, ಬಸಪ್ಪ, ಜಯದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.

ನ್ಯಾಯಾಲಯದ ಜೀವದಾನ
ಹರಪನಹಳ್ಳಿ ವರದಿ:
ಭೂ ಹಗರಣ, ಗಣಿ ಮಾಫಿಯಾ, ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತದಲ್ಲಿ ಮುಳುಗೇಳುತ್ತಿರುವ ಬಿಜೆಪಿ ಸರ್ಕಾರಕ್ಕೆ ನ್ಯಾಯಾಲಯದ ವಾಯಿದೆಗಳೇ ಜೀವದಾನವಾಗಿವೆ ಎಂದು ಕೆಪಿಸಿಸಿ ಸದಸ್ಯ ಸಿ. ಚಂದ್ರಶೇಖರ್ ಭಟ್ ವ್ಯಂಗ್ಯವಾಡಿದರು.

ಬುಧವಾರ ತಾಲ್ಲೂಕಿನ ಹೊಂಬಳಗಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಡಿಗೆ; ಜನರ ಬಳಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಹಿಂದುತ್ವ ಹಾಗೂ ರಾಮಜನ್ಮ ಭೂಮಿಯಂತ ಸ್ಲೋಗನ್‌ಗಳಿಗೆ ಜನ ಮರಳಾಗುತ್ತಿಲ್ಲ. ಅವು ಸವಕಲು ನಾಣ್ಯಗಳಾಗಿಯೂ ಪರಿವರ್ತನೆಯಾಗಿವೆ. ಹಾಗಾಗಿ ಯೋಗಗುರು ಬಾಬಾ ರಾಮದೇವ್ ಮುಖಾಂತರ ಕಪ್ಪುಹಣದ ವಿರುದ್ಧ ಹೋರಾಟದ ಕಪಟ ನಾಟಕಕ್ಕೆ ಬಿಜೆಪಿ ಕೈಹಾಕಿದೆ. ಇಂತಹ ನಾಟಕಗಳು ಕೇವಲ ಕ್ಷಣಿಕ ಎಂದು ಹರಿಹಾಯ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಕೆ. ಹಾಲೇಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯ ಪಟೇಲ್ ಬೆಟ್ಟನಗೌಡ, ಮಹಿಳಾ ಘಟಕದ ಅಂಬುಜಾ ರಾಮಪ್ಪ, ಮುಖಂಡ ಟಿ.ಎಚ್.ಎಂ. ವಿರೂಪಾಕ್ಷಯ್ಯ ಇತರರು ಮಾತನಾಡಿದರು.

ತಾ.ಪಂ. ಉಪಾಧ್ಯಕ್ಷ ಚನ್ನಪ್ಪ, ಪುರಸಭಾ ಸದಸ್ಯರಾದ ಎಂ.ವಿ. ಅಂಜಿನಪ್ಪ, ಮಟ್ಟಿ ಮೃತ್ಯುಂಜಯ, ಶುಕೃಸಾಬ್, ಎಪಿಎಂಸಿ ನಿರ್ದೇಶಕ ಕಾನಹಳ್ಳಿ ರುದ್ರಪ್ಪ, ಸಿದ್ದಲಿಂಗಸ್ವಾಮಿ, ಅಂಜುಮಾನ್ ಸಮಿತಿ ಅಧ್ಯಕ್ಷ ಜಾವೀದ್ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಲ್ಪ ಸಂಖ್ಯಾತರ ರಕ್ಷಣೆ
ಜಗಳೂರು ವರದಿ:
ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ಹೇಳಿದರು.

ತಾಲ್ಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ವಿಶಿಷ್ಟ ಕಾರ್ಯಕ್ರಮ. ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುವುದು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯದ ಜನತೆ ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಜಯಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ವೈ. ದೇವೇಂದ್ರಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲು ಪಕ್ಷದ ಕಾರ್ಯಕರ್ತರ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ. ಕ್ಷೇತ್ರಾದ್ಯಂತ ಸಂಚರಿಸಿ ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಶ್ರಮಿಸಲಾಗುವುದು ಎಂದರು.

ಜಿ.ಪಂ. ಸದಸ್ಯರಾದ ಕೆ.ಪಿ. ಪಾಲಯ್ಯ, ನೇತ್ರಾವತಿ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರಪ್ಪ, ಶಾಮರಾವ್, ಎ. ವೆಂಕಟೇಶ್, ಎಸ್.ಕೆ. ರಾಮರೆಡ್ಡಿ, ಕಲ್ಲೇಶ್ ಪಟೇಲ್, ಜಯವೀರಸ್ವಾಮಿ, ಕೇಶವಮೂರ್ತಿ, ತಿಮ್ಮಾರೆಡ್ಡಿ, ಬಿಸ್ತುವಳ್ಳಿ ಬಾಬು, ವೀರೇಂದ್ರ ಪಾಟೀಲ್, ಕರಿಬಸಪ್ಪ ಹಾಜರಿದ್ದರು.

 ಪಕ್ಷ ಸಂಘಟಿಸಿ
ಹೊನ್ನಾಳಿ ವರದಿ:
ಅಧಿಕಾರಕ್ಕೆ ಬರುವ ಮೊದಲು ಬಡವರ ಪರ ಮಾತನಾಡುತ್ತಿದ್ದ ಬಿಜೆಪಿ ಪ್ರಮುಖರು ಇದೀಗ ಅಧಿಕಾರದ ಮದದಲ್ಲಿ ಮೈಮರೆತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ದುರಾಡಳಿತ ಮಿತಿಮೀರಿದ್ದು, ಜನತೆ ಇದರಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕಾಂಗ್ರೆಸ್ ಮುಖಂಡ ಬಿ. ಸಿದ್ದಪ್ಪ ಹೇಳಿದರು.

ಇಲ್ಲಿನ ತುಂಗಭದ್ರಾ ಬಡಾವಣೆಯ ಸಮುದಾಯ ಭವನದಲ್ಲಿ ನಡೆದ `ಕಾಂಗ್ರೆಸ್ ನಡಿಗೆ ಜನರ ಬಳಿಗೆ~ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಹೊರಗಿಟ್ಟು ನಿರ್ಣಯಗಳನ್ನು ಅಂಗೀಕರಿಸುತ್ತಾರೆ, ಲಕ್ಷಗಟ್ಟಲೇ ಹಣವನ್ನು ಆಡಳಿತ ಪಕ್ಷದವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವಿವಿಧ ವಾರ್ಡ್‌ಗಳ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿದ ್ಙ 10ಕೋಟಿ ಪೈಕಿ ಕೇವಲ ್ಙ 2ಕೋಟಿ ಖರ್ಚು ಮಾಡಿ ಬಾಕಿ ಹಣವನ್ನು ಗುಳುಂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಎನ್.ಆರ್. ಪರಮೇಶ್ವರಪ್ಪ, ಕೆ.ವಿ. ಚನ್ನಪ್ಪ, ಉಮಾಪತಿ, ಎಂ. ಸಿದ್ದಪ್ಪ ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT