ಕಾರವಾರ: `ಮುಂದಿನ ಬಜೆಟ್ನಲ್ಲಿ ಒಂದು ಸಾವಿರ ಗ್ರಾಮಗಳನ್ನು ಸುವರ್ಣ ಗ್ರಾಮ ಯೋಜನೆಯಡಿ ತರಲು ಸರ್ಕಾರ ತೀರ್ಮಾನಿಸಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ಹೇಳಿದರು.
ಇಲ್ಲಿಯ ಮಯೂರವರ್ಮ ವೇದಿಕೆಯಲ್ಲಿ ಬುಧವಾರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಮಿನಿವಿಧಾನಸೌಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿ ಅವರು ಮಾತನಾಡಿದರು.
`ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ 3300 ಗ್ರಾಮಗಳನ್ನು ಈ ಯೋಜನೆಯಡಿ ತರಲಾಗಿದೆ' ಎಂದರು. `ಕಳೆದ ಬಜೆಟ್ನಲ್ಲಿ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದರಿಂದ ಸರ್ಕಾರದ ಮೇಲೆ ರೂ 3600 ಕೋಟಿ ಹೊರೆ ಬಿದ್ದರೂ ರೈತರ ನೆರವಿಗೆ ಬಂದಿದ್ದೇವೆ ಎನ್ನುವ ಸಮಾಧಾನ ಇದೆ' ಎಂದ ಅವರು, `ಫೆಬ್ರುವರಿಯಲ್ಲಿ ಮಂಡಿಸುವ ಬಜೆಟ್ನಲ್ಲಿ ರೈತರಿಗೆ ಹಾಗೂ ಮೀನುಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು' ಎಂದರು.
`ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಳೆದ ನಾಲ್ಕುವರೆ ವರ್ಷದಲ್ಲಿ ಕೇಂದ್ರ ಸರ್ಕಾರ ಒಂದೇಒಂದು ಪೈಸೆ ಅನುದಾನ ನೀಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50 ಕಿಲೋ ಮೀಟರ್ ಗ್ರಾಮೀಣ ರಸ್ತೆ ಸುಧಾರಣೆಗೆ ರಾಜ್ಯ ಸರ್ಕಾರವೇ ಬಜೆಟ್ನಲ್ಲಿ ಹಣ ಮೀಸಲಿಟ್ಟಿದೆ' ಎಂದು ಶೆಟ್ಟರ್ ನುಡಿದರು.
`ಬಿಜೆಪಿ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿ ಟೆಂಡರ್ ಕರೆದು, ಶಿಲಾನ್ಯಾಸ ಮಾಡಿ ನಂತರ ಉದ್ಘಾಟನೆ ಮಾಡಲಾಗಿದೆ. ಇದು ಬಿಜೆಪಿ ಸರ್ಕಾರದ ಆಡಳಿತ ವೈಶಿಷ್ಟ್ಯ' ಎಂದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದ ಅಸ್ನೋಟಿಕರ್ ಸಿ.ಎಂ.ಉದಾಸಿ ವೇದಿಕೆಯಲ್ಲಿದ್ದರು.